ಮಂಗಳೂರು: ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿದ ಶಿಕ್ಷಕ!
25 ನಿಮಿಷದಲ್ಲಿ ಒಂದು ಕಿ.ಮೀ. ಬ್ರೆಸ್ಟ್ ಸ್ಟ್ರೋಕ್ ಈಜು!
![ಮಂಗಳೂರು: ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿದ ಶಿಕ್ಷಕ! ಮಂಗಳೂರು: ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಈಜಿದ ಶಿಕ್ಷಕ!](https://www.varthabharati.in/sites/default/files/images/articles/2020/12/18/271678-1608272266.gif)
ಮಂಗಳೂರು, ಡಿ.18: ಸಾಮಾನ್ಯವಾಗಿ ಸಮುದ್ರದಲ್ಲಿ ಈಜುವುದೆಂದರೆ ಅದೇನು ಅಳುಕು. ಆದರೆ ಇಲ್ಲೊಬ್ಬರು ಶಿಕ್ಷಕರು ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಒಂದು ಕಿಲೋ ಮೀಟರ್ ದೂರದವರೆಗೆ ಈಜಿ ಸಾಹಸ ಮೆರೆದಿದ್ದಾರೆ.
ಈಜಿನ ಮೂಲಕ ಈಗಾಗಲೇ ಸಾಕಷ್ಟು ಸಾಹಸ ಮೆರೆದಿರುವ ಶಿಕ್ಷಕ ನಾಗರಾಜ ಖಾರ್ವಿ ಕಂಚುಗೋಡು ಇಂದು ಪದ್ಮಾಸನ ಹಾಕಿ ಕಾಲಿಗೆ ಸರಪಳಿ ಬಿಗಿದು ಸಮುದ್ರದ ನೀರಿನಲ್ಲಿ 1 ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಬಂಟ್ವಾಳದ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ನಾಗರಾಜ ಖಾರ್ವಿ, ತಣ್ಣೀರುಬಾವಿಯ ಅರಬ್ಬಿ ಸಮುದ್ರದಲ್ಲಿ 25 ನಿಮಿಷ 16 ಸೆಕೆಂಡಿನಲ್ಲಿ ಈ ದಾಖಲೆ ಬರೆದಿದ್ದಾರೆ ಬೆಳಗ್ಗೆ 8:55ಕ್ಕೆ ತಣ್ಣೀರುಬಾವಿಯ ದಡದಿಂದ ಈಜು ಆರಂಭಿಸಿದ ಅವರು 9:20ಕ್ಕೆ ಮರಳಿ ದಡ ಸೇರಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ಅವರು ಈ ಸಾಹಸದ ಈಜು ಹಮ್ಮಿಕೊಂಡಿದ್ದರು. ದ.ಕ. ಜಿಲ್ಲಾ ಕ್ರೀಡಾ ಇಲಾಖೆಯ ಅಧಿಕಾರಿ ಪ್ರದೀಪ್ ಡಿಸೋಜ ಉಪಸ್ಥಿತರಿದ್ದು, ನಾಗರಾಜ ಖಾರ್ವಿಯವರ ದಾಖಲೆಯ ಸಾಹಸಕ್ಕೆ ಸಾಕ್ಷಿಯಾದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿಯಾಗಿರುವ ನಾಗರಾಜ ಖಾರ್ವಿಯವರು ಬಂಟ್ವಾಳ ತಾಲೂಕಿನ ಕಲ್ಮಂಜದ ಸ.ಹಿ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ನಾಗರಾಜ ಕಳೆದ ಜನವರಿಯಲ್ಲಿ ಗುಜರಾತ್ನ ವಡೋದರದಲ್ಲಿ ನಡೆದ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಕಂಚಿನ ಪದಕ ಪಡೆದಿದ್ದರು. ಈಜು ಮತ್ತು ಯೋಗದ ಪ್ರಾಮುಖ್ಯವನ್ನು ಜನಸಾಮಾನ್ಯರಿಗೆ ತಿಳಿಸಬೇಕು, ಸಮುದ್ರದ ಬಗ್ಗೆ ಇರುವ ತಪ್ಪು ಕಲ್ಪನೆ ದೂರ ಮಾಡಬೇಕು ಎಂಬ ಉದ್ದೇಶವೂ ಅವರ ಈ ದಾಖಲೆಯ ಹಿಂದಿದೆ.