ಉತ್ತರಪ್ರದೇಶ: ರೈತ ನಾಯಕರಿಗೆ 50 ಲಕ್ಷ ರೂ. ಬಾಂಡ್ ಸಲ್ಲಿಸಲು ಹೇಳಿದ್ದು `ಪ್ರಮಾದ' ಎಂದು ಒಪ್ಪಿಕೊಂಡ ಅಧಿಕಾರಿಗಳು
ಲಕ್ನೋ,ಡಿ.18: ಕೇಂದ್ರ ಜಾರಿಗೊಳಿಸಿರುವ ನೂತನ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸ್ಥಳೀಯ ರೈತರಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಸಂಭಲ್ನ ಆರು ಮಂದಿ ರೈತ ನಾಯಕರಿಗೆ ರೂ. 50 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಪೊಲೀಸರು ನೋಟಿಸ್ ಹೊರಡಿಸಿದ್ದರು. ಇದೀಗ ತಾವು ಸೂಚಿಸಿದ ಆರು ದಿನಗಳೊಳಗಾಗಿ ಸ್ಪಷ್ಟೀಕರಣ ನೀಡಿರುವ ಪೊಲೀಸರು ಅಷ್ಟೊಂದು ದೊಡ್ಡ ಮೊತ್ತ ನಮೂದಿಸಿದ್ದು ಒಂದು ಪ್ರಮಾದ, ಅದನ್ನು ಸರಿಪಡಿಸಲಾಗುವುದು ಎಂದಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ನ ಸಂಭಲ್ ಜಿಲ್ಲಾಧ್ಯಕ್ಷ ರಾಜಪಾಲ್ ಸಿಂಗ್ ಸಹಿತ ಆರು ರೈತ ನಾಯಕರಿಗೆ ನೋಟಿಸ್ ಜಾರಿಯಾಗಿತ್ತು. ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿ ಕುಮಾರ್ ಸಿಂಗ್, “ಎಸ್ಡಿಎಂ ಈಗ ರಜೆಯಲ್ಲಿದ್ದಾರೆ, ಹಿಂದೆ ಬಾಂಡ್ ಗೆ ನಮೂದಿಸಲಾಗಿದ್ದ ಮೊತ್ತ ಒಂದು ಪ್ರಮಾದವಾಗಿತ್ತು, 50,000ರೂ. ಮೊತ್ತದ ವೈಯಕ್ತಿಕ ಬಾಂಡ್ ನೀಡುವಂತೆ ಹೇಳಲಾಗುವುದು,'' ಎಂದಿದ್ದಾರೆ.
Next Story