ಉಡುಪಿ : 41 ದಿನಗಳ ಬಳಿಕ ಕೋವಿಡ್ಗೆ ವೃದ್ಧ ಬಲಿ

ಉಡುಪಿ, ಡಿ.18: ಜಿಲ್ಲೆಯಲ್ಲಿ 41 ದಿನಗಳ ಬಳಿಕ ಕೊರೋನ ಸೋಂಕಿಗೆ ಮೊದಲ ಸಾವು ಸಂಭವಿಸಿದೆ. ಕಳೆದ ನವೆಂಬರ್ 7ರಂದು ಜಿಲ್ಲೆಯಲ್ಲಿ ಕೊನೆ ಬಾರಿಗೆ ಕೋವಿಡ್ನಿಂದ ಸಾವು ವರದಿಯಾಗಿದ್ದು, ಇದೀಗ ಆರು ವಾರಗಳ ಬಳಿಕ ಕಾರ್ಕಳದ 69 ವರ್ಷ ಪ್ರಾಯದ ಪುರುಷರೊಬ್ಬರು ಕೋವಿಡ್ಗೆ ಜಿಲ್ಲೆಯ 188ನೇ ಬಲಿಯಾಗಿದ್ದಾರೆ.
ಉಸಿರಾಟ ತೊಂದರೆಯೊಂದಿಗೆ ಕೋವಿಡ್ನ ಗುಣಲಕ್ಷಣದೊಂದಿಗೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಇವರು, ಮಧುಮೇಹ ಸಹಿತ ಇತರ ಕಾಯಿಲೆಯಿಂದ ಬಳಲುತಿದ್ದು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತ ಪಟ್ಟಿದ್ದಾರೆ.
ಶುಕ್ರವಾರ ಐವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. 14 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರೆ, 116 ಮಂದಿಯಲ್ಲಿ ಮಾತ್ರ ಸೋಂಕು ಸಕ್ರಿಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು. ತಲಾ ಒಬ್ಬ ಪುರುಷ ಹಾಗೂ ಮಹಿಳೆಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇಂದು ಸೋಂಕು ಪತ್ತೆಯಾದ ಎಲ್ಲಾ ಐವರು ಕುಂದಾಪುರ ತಾಲೂಕಿನವರು ಎಂದು ಡಾ.ಸೂಡ ತಿಳಿಸಿದರು.
14 ಮಂದಿ ಗುಣಮುಖ: ಗುರುವಾರ ಜಿಲ್ಲೆಯಲ್ಲಿ 14 ಮಂದಿ ಚಿಕಿತ್ಸೆ ಯಿಂದಾಗಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ ಈಗ 22,642ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 116 ಮಂದಿ ಕೆವಿಡ್ಗೆ ಸಕ್ರಿಯರಿದ್ದಾರೆ ಎಂದರು.
1113 ನೆಗೆಟಿವ್: ಜಿಲ್ಲೆಯಲ್ಲಿ ಗುರುವಾರ ಒಟ್ಟು 1118 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1113 ಮಂದಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಉಳಿದ 5 (ಐಸಿಎಂಆರ್ ವರದಿ) ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,946ಕ್ಕೇರಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಗುರುವಾರದವರೆಗೆ ಒಟ್ಟು 2,70,671 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇವರಲ್ಲಿ 2,47,725 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 22,946 ಮಂದಿ ಪಾಸಿಟಿವ್ ಬಂದಿದ್ದರೆ, 22,642 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈಗ ಕೋವಿಡ್ಗೆ ಬಲಿಯಾದವರ ಸಂಖ್ಯೆ 188 ಎಂದು ಇಲಾಖೆ ತಿಳಿಸಿದೆ.







