ಉಡುಪಿ ಜಿಲ್ಲೆಯಲ್ಲಿ 17,641 ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ : ಡಿಸಿ ಜಗದೀಶ್
![ಉಡುಪಿ ಜಿಲ್ಲೆಯಲ್ಲಿ 17,641 ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ : ಡಿಸಿ ಜಗದೀಶ್ ಉಡುಪಿ ಜಿಲ್ಲೆಯಲ್ಲಿ 17,641 ಮಂದಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ : ಡಿಸಿ ಜಗದೀಶ್](/images/placeholder.jpg)
ಉಡುಪಿ, ಡಿ.18: ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 17,641 ಮಂದಿಗೆ ಪ್ರಥಮ ಹಂತದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಗೆ 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕೋವಿಡ್-19 ಲಸಿಕೆ ಸರಬರಾಜು ಆಗುವ ನಿರೀಕ್ಷೆಯಿದ್ದು, ಈ ಲಸಿಕೆಯನ್ನು ಪ್ರಾಥಮಿಕ ವಾಗಿ ಕರೋನ ವಿರುದ್ಧ ಹೋರಾಡುತ್ತಿರುವ ಪ್ರಂಟ್ಲೈನ್ ವರ್ಕರ್ಗಳಾದ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ನೀಡಬೇಕಾಗಿದ್ದು, ಇದಕ್ಕಾಗಿ ಜಿಲ್ಲೆ ಯಲ್ಲಿ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 17,641 ಮಂದಿಯ ಡಾಟಾ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಲಸಿಕೆ ನೀಡಲು ಗುರುತಿಸಲಾಗಿರುವ ಪ್ರತಿಯೊಬ್ಬರಿಗೂ 2 ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡುವ ಕುರಿತಂತೆ ಈಗಾಗಲೇ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಲಸಿಕೆ ಸಂಗ್ರಹ ಕೊಠಡಿ ಸಿದ್ಧಪಡಿಸಲಾಗಿದ್ದು, ಲಸಿಕೆ ಸಾಗಾಟಕ್ಕೆ 1,324 ವಾಹನಗಳನ್ನು ಗುರುತಿಸಲಾಗಿದೆ. ಒಂದು ಸ್ಥಳದಲ್ಲಿ 100 ಮಂದಿಗೆ ಲಸಿಕೆ ನೀಡಲು ನಿರ್ಧರಿಸಿದ್ದು, ಒಟ್ಟು 342 ಸರಕಾರಿ ಮತ್ತು 18 ಖಾಸಗಿ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ 5 ಮಂದಿ ಕರ್ತವ್ಯ ನಿರ್ವಹಿಸಲಿದ್ದು, ಲಸಿಕೆ ಪಡೆಯುಲು ಬರುವವರಿಗೆ ನಿರೀಕ್ಷಣಾ ಕೊಠಡಿ, ಲಸಿಕೆ ನೀಡುವ ಕೊಠಡಿ ಮತ್ತು ಲಸಿಕೆ ನೀಡಿದ ನಂತರ ನಿರೀಕ್ಷಣಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಜಗದೀಶ್ ವಿವರಿಸಿದರು.
ಈಗಾಗಲೇ ಗುರುತಿಸಲಾಗಿರುವ ಸರಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಲಸಿಕೆ ನೀಡುವ ಸ್ಥಳ, ಸಮಯದ ಕುರಿತು ಎಸ್ಎಂಎಸ್ ಮೂಲಕ ಸಂದೇಶ ಬರಲಿದ್ದು, ಇದರಲ್ಲಿ ಯಾವ ಲಸಿಕೆ ನೀಡಲಾಗುವುದು ಎಂಬ ಬಗ್ಗೆ ಸಂಪೂರ್ಣ ವಿವರ ಇರಲಿದೆ. ಎರಡು ಹಂತದ ಡೋಸ್ ಲಸಿಕೆ ನೀಡಿದ ಬಳಿಕ, ಅವರಿಗೆ ಲಸಿಕೆ ಪಡೆದ ಕುರಿತು ಪ್ರಮಾಣ ಪತ್ರ ಸಹ ವಿತರಿಸಲಾಗುವುದು ಎಂದು ಡಿಸಿ ಹೇಳಿದರು.
ಸಂಪೂರ್ಣ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಲಸಿಕೆ ನೀಡಲು ಕ್ರಮ ಕೈಗೊಂಡಿದ್ದು, ಲಸಿಕೆ ನೀಡಿದ ನಂತರ ಸಿರೆಂಜ್ ಇತ್ಯಾದಿ ತ್ಯಾಜ್ಯ ಉಪಕರಣಗಳನ್ನು ಅತ್ಯಂತ ಸುರಕ್ಷಿತವಾಗಿ ವಿಲೇವಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಲು ಗುರುತಿಸಲಾಗಿರುವ ಕೊಠಡಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಲು ನೋಡೆಲ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಕೋವಿಡ್ ಲಸಿಕೆ ನೀಡುವ ಕುರಿತಂತೆ ಈಗಾಗಲೇ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಿದ್ದು, ತಾಲೂಕು ಕೇಂದ್ರಗಳಲ್ಲಿ ತರಬೇತಿ ನೀಡುವ ಬಗ್ಗೆ ದಿನ ನಿಗದಿ ಪಡಿಸಲಾಗಿದೆ. ಡಿಸೆಂಬರ್ ಅಂತ್ಯದ ವೇಳಗೆ ಸಂಪೂರ್ಣವಾಗಿ ಎಲ್ಲಾ ತರಬೇತಿ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ. ಎಂ.ಜಿ.ರಾಮ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ.ನವೀನ್ ಭಟ್ ವೈ., ಡಿಎಚ್ಓ ಡಾ.ಸುಧೀರ್ಚಂದ್ರ ಸೂಡಾ, ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.