ಚಲನಚಿತ್ರ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ನಿಧನ

ಬೆಂಗಳೂರು, ಡಿ.19: ಕನ್ನಡ ಚಿತ್ರೋದ್ಯಮದ ಹಿರಿಯ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ(71) ಅವರು ಶನಿವಾರ ನಗರದ ಕೆಂಗೇರಿಯ ತಮ್ಮ ಸ್ವಗೃಹದಲ್ಲಿ ಬೆಳಗ್ಗೆ 6.45ಕ್ಕೆ ನಿಧನರಾಗಿದ್ದಾರೆ. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಹುಳಿಯಾರು ಸಮೀಪದ ಬೂದಾಳುವಿನಲ್ಲಿ 1949ರಲ್ಲಿ ಜನಿಸಿದ ಕೃಷ್ಣಮೂರ್ತಿ ಪದವಿ ವ್ಯಾಸಂಗದ ನಂತರ ಬೆಂಗಳೂರಿಗೆ ಆಗಮಿಸಿ ಸಿದ್ದಲಿಂಗಯ್ಯ ನಿರ್ದೇಶನದ ಬೂತಯ್ಯನ ಮಗ ಅಯ್ಯು, ಹೇಮಾವತಿ ಸೇರಿ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚಸಾಮ್ರಾಜ್ಯ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಇದೊಳ್ಳೆ ಮಹಾಭಾರತ ಎಂಬ ಅವರ ನಿರ್ದೇಶನದ ಕಡೆಯ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ.
ಕೃಷ್ಣಮೂರ್ತಿ ನಿರ್ದೇಶನ ಮಾತ್ರವಲ್ಲದೆ ಅಭಿನಯದಲ್ಲಿಯೂ ನುರಿತಿದ್ದರು. 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಇವರು ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ಆರ್ಯಭಟ ಇನ್ನೂ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ಕೃಷ್ಣಮೂರ್ತಿ ತಮ್ಮ ನಿರ್ದೇಶನದ ಕೆಲ ಚಿತ್ರಗಳಿಗೆ ಹಾಡನ್ನೂ ಬರೆದಿದ್ದರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೃಷ್ಣಮೂರ್ತಿ ಅವರು ಕೆಲವು ಕಾಲದಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಅಗಲಿಕೆ ಚಿತ್ರೋದ್ಯಮಕ್ಕೆ ಹಾಗೂ ನಿರ್ದೇಶಕರ ಸಂಘಕ್ಕೆ ಭಾರಿ ನೋವನ್ನು ತಂದಿದ್ದು, ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.







