ಹೆಜಮಾಡಿ : ನದಿಯಲ್ಲಿ ಮುಳುಗಿ ಯುವಕ ಮೃತ್ಯು
![ಹೆಜಮಾಡಿ : ನದಿಯಲ್ಲಿ ಮುಳುಗಿ ಯುವಕ ಮೃತ್ಯು ಹೆಜಮಾಡಿ : ನದಿಯಲ್ಲಿ ಮುಳುಗಿ ಯುವಕ ಮೃತ್ಯು](https://www.varthabharati.in/sites/default/files/images/articles/2020/12/19/271784-1608364814.jpeg)
ಪಡುಬಿದ್ರಿ : ಮುಲ್ಕಿ ಸಮೀಪದ ಹೆಜಮಾಡಿಯ ಕೊಕ್ರಾಣಿ ಶಾಂಭವಿ ನದಿಯಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೀನಿಗೆ ಹಾಕಿದ ಬಲೆ ತೆಗೆಯಲು ಹೋಗಿ ಆ ಬಲೆಯಲ್ಲಿಯೇ ಸಿಲುಕಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮುಲ್ಕಿ ಬಳಿಯ ಕಕ್ವ ನಿವಾಸಿ ವಿಜಯ್ ಫುರ್ಟಾಡೋ ಎಂದು ಗುರುತಿಸಲಾಗಿದೆ.
ಶುಕ್ರವಾರ ಮೀನು ಹಿಡಿಯಲು ಬಲೆ ಹಾಕಿದ್ದು, ರಾತ್ರಿ 10ರ ಸುಮಾರಿಗೆ ಪರಿಶೀಲಿಸಲು ತೆರಳಿದಾಗ ಬಲೆಯೊಳಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ. ನದಿ ತೀರಕ್ಕೆ ತೆರಳಿದ ವಿಜಯ್ ಮನೆ ಕಡೆ ಬಾರದ್ದನ್ನು ಕಂಡು ತಾಯಿ ಆತಂಕಗೊಂಡು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಕಾರ್ನಾಡು ಆಪತ್ಪಾಂಧವ ಆಸೀಫ್ ಅವರ ನೆರವಿನಿಂದ ಮೃತದೇಹ ಮೇಲೆತ್ತಿದ್ದಾರೆ. ವಿಜಯ್ ಅವರು ದುಬೈನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ಕೊರೋನ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ನೆಲೆಸಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದರು.
ಮುಲ್ಕಿಯ ಮೆಡಲಿನ್, ವಿಜಯ ಕಾಲೇಜು ಹಳೆ ವಿದ್ಯಾರ್ಥಿಯಾಗಿದ್ದ ಅವರು ಕ್ರಿಕೆಟ್, ವಾಲಿಬಾಲ್ ನಲ್ಲಿ ಪ್ರತಿಭಾವಂತರಾಗಿದ್ದರು. ವಿಜಯ್ ಅವರು ತಾಯಿ, ಪತ್ನಿ, ಇಬ್ಬರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.
ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.