ಚುನಾವಣೆಗೆ ಸ್ಪರ್ಧಿಸಲು ರಕ್ಷಣೆ ಕೇಳಿದ ಮಹಿಳೆಯಿಂದ ನಾಮಪತ್ರ ಹಿಂದೆಗೆತ
೩೪ ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ಇಬ್ಬರು ಅವಿರೋಧ ಆಯ್ಕೆ
ಉಪ್ಪಿನಂಗಡಿ: ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯಬೇಕೆಂದು ನನಗೆ ಒತ್ತಡಗಳು ಬರುತ್ತಿದೆ. ಆದ್ದರಿಂದ ನನಗೆ ಸೂಕ್ತ ರಕ್ಷಣೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಬೇಕೆಂದು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದ ೩೪ ನೆಕ್ಕಿಲಾಡಿ ಗ್ರಾ.ಪಂ.ನ ಅಭ್ಯರ್ಥಿ ಶಶಿಪ್ರಭಾ ಅವರು ಶನಿವಾರ ತನ್ನ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಇದರಿಂದ ಅಲ್ಲಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವಂತಾಗಿದೆ.
ಪುತ್ತೂರು ತಾಲೂಕಿನ ೩೪ ನೆಕ್ಕಿಲಾಡಿ ಗ್ರಾ.ಪಂ. ಪಂಚಾಯತ್ನ ೧ನೇ ಕ್ಷೇತ್ರ ಹಾಗೂ ೩ನೇ ಕ್ಷೇತ್ರದಲ್ಲಿ ಅನುಸೂಚಿತ ಪಂಗಡದ ಕೆಟಗರಿಯಲ್ಲಿ ನಾನು ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ ನಿನ್ನೆಯಿಂದ ನನಗೆ ಬಿಜೆಪಿ ಬೆಂಬಲಿಗರು ನಾಮಪತ್ರ ಹಿಂಪಡೆಯಬೇಕೆಂದು ಬೆದರಿಕೆಯೊಡ್ಡುತ್ತಿದ್ದು, ನನ್ನ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವದಡಿಯಲ್ಲಿ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಬೇಕು ಹಾಗೂ ನನಗೆ ಸೂಕ್ತ ರಕ್ಷಣೆಗೆಯನ್ನು ನೀಡಬೇಕೆಂದು ಆಗ್ರಹಿಸಿ ಸಾಂತ್ಯಡ್ಕ ನಿವಾಸಿ ಕುಶಾಲಪ್ಪ ಎಂಬವರ ಪತ್ನಿ ಶಶಿಪ್ರಭಾ ಅವರು ಡಿ.18ರಂದು ೩೪ ನೆಕ್ಕಿಲಾಡಿ ಗ್ರಾ.ಪಂ.ನ ಸಹಾಯಕ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.
ಆದರೆ ಡಿ.೧೯ರಂದು ಮಧ್ಯಾಹ್ನ ೩೪ ನೆಕ್ಕಿಲಾಡಿ ಗ್ರಾ.ಪಂ.ಗೆ ಆಗಮಿಸಿದ ಅವರು ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದಾರೆ. ಆದ್ದರಿಂದ ವಾರ್ಡ್ ಸಂಖ್ಯೆ ೧ರಲ್ಲಿ ಸ್ಪರ್ಧಿಸಿದ್ದ ಹರೀಶ್ ಡಿ. ಹಾಗೂ ವಾರ್ಡ್ ಸಂಖ್ಯೆ ೩ರಲ್ಲಿ ಸ್ಪರ್ಧಿಸಿದ್ದ ಎ. ರತ್ನಾವತಿಯವರು ಅವಿರೋಧವಾಗಿ ಆಯ್ಕೆಯಾಗುವಂತಾಗಿದೆ.