ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ
![ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ](https://www.varthabharati.in/sites/default/files/images/articles/2020/12/20/271950-1608475237.jpeg)
ಮಂಗಳೂರು, ಡಿ.20: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸಂಭ್ರಮ, ಸಡಗರದ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರವಿವಾರ ವೈಭವದಿಂದ ನೆರವೇರಿತು.
ಮುಂಜಾನೆ 5 ಗಂಟೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ಆಗಮಿಸಿ ಶ್ರೀ ದೇವರಿಗೆ ತಂಬಿಲ, ಪಂಚಾಮೃತ, ಕೇದಗೆ, ಹಿಂಗಾರ, ಬೆಳ್ಳಿ, ಚಿನ್ನದ ಹರಕೆಗಳನ್ನು ಒಪ್ಪಿಸಿ ಕೃತಾರ್ಥರಾದರು. ಕ್ಷೇತ್ರಕ್ಕೆ ಸುಮಾರು 30 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದರು.
ವಿಶೇಷ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಅಷ್ಟೋತ್ತರ ಅರ್ಚನೆ, ಹರಿವಾಣ ನೈವೇದ್ಯಸೇವೆ ಜರಗಿ ಮಧ್ಯಾಹ್ನ ಸರ್ವಾಭರಣ ಭೂಷಿತ ಅನಂತ ಪದ್ಮನಾಭ ದೇವರಿಗೆ ಷಷ್ಠಿಯ ಮಹಾಪೂಜೆ ನಡೆಯಿತು. ನಂತರ ಶ್ರೀದೇವರ ಬಲಿ ಹೊರಟು ರಥಾರೋಹಣವಾಗಿ ಶ್ರೀದೇವರ ವೈಭವದ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು.
ಸಹಸ್ರಾರು ಭಕ್ತರು ದೇವರ ನಾಮಸ್ಮರಣೆಯೊಂದಿಗೆ ರಾಜಬೀದಿಯಲ್ಲಿ ಬ್ರಹ್ಮರಥ ಎಳೆದರು. ಮಧ್ಯಾಹ್ನ 20 ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ, ಆಡಳಿತ ಮಂಡಳಿಯ ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.