ಉಜಿರೆ ಬಾಲಕನ ಅಪಹರಣ ಪ್ರಕರಣ : ಆರು ಮಂದಿ ಪೊಲೀಸ್ ಕಸ್ಟಡಿಗೆ
ಮಂಗಳೂರು, ಡಿ.20: ಉಜಿರೆ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಮಂಡ್ಯ ನಿವಾಸಿಗಳಾದ ರಂಜಿತ್ (22), ಹನುಮಂತ್ (21), ಮೈಸೂರು ನಿವಾಸಿ ಗಂಗಾಧರ (25), ಬೆಂಗಳೂರಿನ ನಿವಾಸಿ ಕಮಲ್ (22), ಕೋಲಾರ ನಿವಾಸಿಗಳಾದ ಮಂಜುನಾಥ್ (24), ಮಹೇಶ್ (26) ಬಂಧಿತ ಆರೋಪಿಗಳು.
ಡಿ.17ರಂದು ಉಜಿರೆ ಶಿವನ್ ಅವರ ಮನೆ ಬಳಿಯಿಂದ ಮೊಮ್ಮಗನನ್ನು ಅಪಹರಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀಪ್ರಸಾದ್ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದರು. ತನಿಖಾ ತಂಡ ಕ್ಷಿಪ್ರಗತಿಯಲ್ಲಿ ತನಿಖೆ ನಡೆಸಿ ಕೋಲಾರ ಜಿಲ್ಲೆ ಎಸ್ಪಿ ಕಾರ್ತಿಕ್ ಅವರ ಸಹಕಾರದೊಂದಿಗೆ ಆರೋಪಿಗಳನ್ನು ಡಿ.19ರಂದು ಕೋಲಾರದ ಮಾಸ್ತಿಯಲ್ಲಿ ಬಂಧಿಸಿದೆ. ಮಗುವನ್ನು ರಕ್ಷಿಸಿಸಲಾಗಿದ್ದು, ಶನಿವಾರ ಹೆತ್ತವರಿಗೆ ಒಪ್ಪಿಸಲಾಗಿದೆ.
ಕೋವಿಡ್ ಪರೀಕ್ಷೆ ನೆಗೆಟಿವ್: ಪೊಲೀಸ್ ವಶದಲ್ಲಿರುವ ಆರೋಪಿಗಳ ಕೋವಿಡ್-19 ತಪಾಸಣೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ.
ಪೊಲೀಸ್ ಕಸ್ಟಡಿಗೆ: ಅಪಹರಣ ಪ್ರಕರಣದ ಪ್ರಮುಖ ಆರೋಪಿಯನ್ನು ಹೊರತು ಪಡಿಸಿ, ಉಳಿದ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಮಗುವಿನ ಕಿಡ್ನಾಪ್ ಪ್ರಮುಖ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.