ಉಜಿರೆ : ಅಬ್ದುಲ್ ರಝಾಕ್ ಸಖಾಫಿ ಕಳೆಂಜಿಬೈಲು ನಿಧನ

ಬೆಳ್ತಂಗಡಿ : ಕರ್ನಾಟಕದ ಹಿರಿಯ ವಿದ್ವಾಂಸರಾದ ಉಜಿರೆ ಮುಹ್ಯುದ್ದೀನ್ ಜುಮಾ ಮಸ್ಜಿದ್ ಹಳೆಪೇಟೆ ಇಲ್ಲಿನ ಪ್ರಧಾನ ಧರ್ಮಗುರು ಅಬ್ದುರ್ರಝಾಕ್ ಸಖಾಫಿ ಕಳಂಜಿಬೈಲು ಡಿ. 19ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಲ್ಲಕಟ್ಟ ನಿವಾಸಿ ದಿ. ಅಬ್ದುಲ್ ಖಾದರ್ ಹಾಜಿ ಮತ್ತು ಆಯಿಶಾ ಹಜ್ಜುಮ್ಮ ದಂಪತಿ ಪುತ್ರರಾಗಿದ್ದ ಅಬ್ದುಲ್ ರಝಾಕ್ ಸಖಾಫಿ ಅವರು ಕರ್ನಾಟಕ ರಾಜ್ಯ ಸಖಾಫೀಸ್ ಕೌನ್ಸಿಲ್ ಇದರ ಬೆಳ್ತಂಗಡಿ ತಾ. ಸಮಿತಿ ನಿರ್ದೇಶಕರೂ ಆಗಿದ್ದರು. ಕೇರಳದ ಕಲ್ಲಿಕೋಟೆ ಮರ್ಕಝ್ ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಯಲ್ಲಿ ಧಾರ್ಮಿಕ ಸಖಾಫಿ ಪದವಿ ಪಡೆದಿದ್ದ ಅವರು ಬೇಕಲ್ ಉಸ್ತಾದರ ಶಿಷ್ಯರಲ್ಲಿ ಓರ್ವ ರಾಗಿದ್ದರು. ಪೇರಮುಗರು, ಪುತ್ತಿಗೆ, ಸುಳ್ಯದ ಎಲಿಮಲೆ, ನೆಲ್ಯಾಡಿಯಲ್ಲಿ ಮುದರ್ರಿಸರಾಗಿ ಕರ್ತವ್ಯ ನಿರ್ವಹಿಸಿ ಕಳೆದ ಎರಡು ತಿಂಗಳಿನಿಂದ ಉಜಿರೆ ಕೇಂದ್ರ ಮಸ್ಜಿದ್ನಲ್ಲಿ ಮುದರ್ರಿಸರಾಗಿದ್ದರು.
ಬೆಳಿಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.





