ಉಚಿತ ಸಾಮೂಹಿಕ ಸುನ್ನತ್, ರಕ್ತದಾನ ಶಿಬಿರ
ಮಂಗಳೂರು : ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆ ಜಮಾಅತ್, ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ಯು.ಟಿ.ಫರೀದ್ ಫೌಂಡೇಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಯೋಗದಲ್ಲಿ ಚೆಂಬುಗುಡ್ಡೆ ಮಸೀದಿ ಸಭಾಂಗಣದಲ್ಲಿ ರವಿವಾರ ಉಚಿತ ಸಾಮೂಹಿಕ ಸುನ್ನತ್ ಮತ್ತು ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ ಕಣಚೂರು ಸಮೂಹ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹ್ಮಾನ್ ಮಾತನಾಡಿ, ಕರೋನ ಎನ್ನುವ ಸಾಂಕ್ರಾಮಿಕ ಕಾಯಿಲೆ ಈಗಲೂ ಇದ್ದು ಈ ಬಗ್ಗೆ ಜನರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಧಾರ್ಮಿಕ ಕೇಂದ್ರಗಳಲ್ಲೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧರ್ಮ ಗುರುಗಳು ಕಾರ್ಯನಿರ್ವಹಿಸಬೇಕಿದೆ. ಇಂದು ನಾವು ಸುರಕ್ಷಿತವಾಗಿರಲು ಕುಟುಂಬ, ಪ್ರಾಣದ ಹಂಗು ತೊರೆದು ದೇಶ ಸೇವೆ ಮಾಡುತ್ತಿರುವ ಸೈನಿಕರ ಪರಿಶ್ರಮವೇ ಕಾರಣ, ಅಂತಹ ಓರ್ವ ಸೈನಿಕ ನಮ್ಮೂರಲ್ಲೂ ಇರುವುದು ಹೆಮ್ಮೆಯ ವಿಚಾರ. ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಸಾಮಾಜಿಕವಾಗಿ ನಡೆಸುವ ಕಾರ್ಯಕ್ರಮಗಳಿಗೆ ಸಂಸ್ಥೆ ಸದಾ ಸಹಕಾರ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಯೋಧ ಪ್ರವೀಣ್ ಶೆಟ್ಟಿ ಹಾಗೂ ಸಮಾಜ ಸೇವಕ ಮಹಮ್ಮದ್ ಅಶ್ರಫ್ ಕೆರೆಬೈಲ್ ಅವರನ್ನು ಸನ್ಮಾನಿಸಲಾಯಿತು.
ಚೆಂಬುಗುಡ್ಡೆ ಜುಮಾ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅಹ್ಸನಿ ಉದ್ಘಾಟಿಸಿದರು. ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಣಚೂರು ಆಸ್ಪತ್ರೆಯ ವೈದ್ಯ ಸಂಶಾದ್ ಖಾನ್, ಮಸೀದಿಯ ಅಧ್ಯಕ್ಷ ಪಿ.ಸಿ.ಇಮ್ತಿಯಾಝ್ ಮುಖ್ಯ ಅತಿಥಿಗಳಾಗಿದ್ದರು.
ಮುನೀರ್ ಚೆಂಬುಗುಡ್ಡೆ ಸ್ವಾಗತಿಸಿದರು. ಇಮ್ತಿಯಾಝ್ ಕುತ್ತಾರ್ ವಂದಿಸಿದರು. ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.