ಉಡುಪಿ: ರವಿವಾರ 4 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ರೋಗಕ್ಕೆ ಸಕ್ರಿಯರ ಸಂಖ್ಯೆ ಎರಡಂಕಿಗೆ ಇಳಿಕೆ
![ಉಡುಪಿ: ರವಿವಾರ 4 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ ಉಡುಪಿ: ರವಿವಾರ 4 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ](https://www.varthabharati.in/sites/default/files/images/articles/2020/12/20/271966-1608479402.jpg)
ಉಡುಪಿ, ಡಿ.20: ಜಿಲ್ಲೆಯಲ್ಲಿ ರವಿವಾರ ಕೇವಲ 4 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. 22 ಮಂದಿ ಚಿಕಿತ್ಸೆಯಿಂದ ಗುಣಮುಖ ರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಂಡರೆ, ಜಿಲ್ಲೆಯಲ್ಲಿ ರೋಗಕ್ಕೆ ಸಕ್ರಿಯರ ಸಂಖ್ಯೆ ಏಳು ತಿಂಗಳಲ್ಲಿ ಮೊದಲ ಬಾರಿ ಎರಡಂಕಿಗೆ ಇಳಿದಿದೆ. ಜಿಲ್ಲೆಯಲ್ಲೀಗ 92 ಮಂದಿ ಯಲ್ಲಿ ಕೊರೋನ ಸಕ್ರಿಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ತಲಾ ಇಬ್ಬರು ಪುರುಷರು ಹಾಗೂ ಮಹಿಳೆಯರಾಗಿದ್ದಾರೆ. ಒಬ್ಬ ಪುರುಷನಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇಂದು ಸೋಂಕು ಪತ್ತೆಯಾದವರಲ್ಲಿ ಉಡುಪಿ ತಾಲೂಕಿನ ಇಬ್ಬರು, ಕುಂದಾಪುರ ತಾಲೂಕು ಮತ್ತು ಹೊರಜಿಲ್ಲೆಯ ತಲಾ ಒಬ್ಬರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
22 ಮಂದಿ ಗುಣಮುಖ: ಶನಿವಾರ ಜಿಲ್ಲೆಯಲ್ಲಿ 22 ಮಂದಿ ಚಿಕಿತ್ಸೆ ಯಿಂದಾಗಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ ಈಗ 22,678ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 92 ಮಂದಿ ಕೆವಿಡ್ಗೆ ಸಕ್ರಿಯರಿದ್ದಾರೆ ಎಂದರು.
1374 ನೆಗೆಟಿವ್: ಜಿಲ್ಲೆಯಲ್ಲಿ ಶನಿವಾರ ಒಟ್ಟು 1378 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1374 ಮಂದಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಉಳಿದ 4 (ಐಸಿಎಂಆರ್ ವರದಿ) ಮಂದಿಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,958ಕ್ಕೇರಿದೆ ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಶನಿವಾರದವರೆಗೆ ಒಟ್ಟು 2,73,414 ಮಂದಿ ಕೋವಿಡ್ ಪರೀಕ್ಷೆ ಗೊಳಗಾಗಿದ್ದಾರೆ. ಇವರಲ್ಲಿ 2,50,456 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 22,958 ಮಂದಿ ಪಾಸಿಟಿವ್ ಬಂದಿದ್ದರೆ, 22,678 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಇಂದು ಸಹ ಕೋವಿಡ್ನಿಂದ ಯಾರೂ ಮೃತಪಟ್ಟಿಲ್ಲ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 188 ಎಂದು ಇಲಾಖೆ ತಿಳಿಸಿದೆ.