ರತ್ನಗಿರಿಯಲ್ಲಿ ಹಳಿತಪ್ಪಿದ ಯುಟಿವಿ : ಹಲವು ರೈಲುಗಳ ಸಂಚಾರ ನಿಯಂತ್ರಣ
ಉಡುಪಿ, ಡಿ.20: ಕೊಂಕಣ ರೈಲು ಮಾರ್ಗದ ರತ್ನಗಿರಿಯ ವಲಯದ ದಿವಾನ್ಖಾವ್ಟಿ ಹಾಗೂ ಖೇಡ್ ನಡುವೆ ಇಂದು ಮುಂಜಾನೆ 6:57ರ ಸುಮಾರಿಗೆ ಯುಟಿಲಿಟಿ ಟ್ರಾಕ್ ವಾಹನ (ಯುಟಿವಿ)ವೊಂದರ ಮುಂಭಾಗ ಹಳಿ ತಪ್ಪಿದ ಪರಿಣಾಮ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ವಿವಿದೆಡೆ ನಿಯಂತ್ರಿಸಲಾಗಿದೆ.
ಹಳಿಯ ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ಅಪರಾಹ್ನದ ವೇಳೆ ಮತ್ತೆ ಸಂಚಾರಕ್ಕೆ ಯೋಗ್ಯಗೊಳಿಸಲಾಯಿತು. ಅಪರಾಹ್ನ 3:47ಕ್ಕೆ ಹಳಿ ಸಂಚಾರಕ್ಕೆ ಯೋಗ್ಯವೆಂದು ತಾಂತ್ರಿಕ ಸಮಿತಿ ಪ್ರಮಾಣೀಕರಿಸಿದೆ. ಇದರಿಂದ ಹಲವು ಗಂಟೆಗಳ ವಿಳಂಬದ ಬಳಿಕ ರೈಲುಗಳ ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಉಪ ಮಹಾಪ್ರಬಂಧಕರು ತಿಳಿಸಿದ್ದಾರೆ.
ಇದರಿಂದ ರೈಲು ನಂ.02197 ಜಬಲಪುರ-ಕೊಯಮತ್ತೂರು ಸೂಪರ್ಫಾಸ್ಟ್ ಸ್ಪೆಷಲ್ನ್ನು ಕಾರಂಜಾಡಿ ನಿಲ್ದಾಣದಲ್ಲಿ ಬೆಳಗ್ಗೆ 7:21ಕ್ಕೆ, ನಂ.02618 ಎಚ್.ನಿಝಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಸೂಪರ್ಫಾಸ್ಟ್ ಸ್ಪೆಷಲ್ನ್ನು ಕೊಲಾಡ್ ನಿಲ್ದಾಣದಲ್ಲಿ ಬೆಳಗ್ಗೆ 8:59ಕ್ಕೆ, ನಂ.02617 ಎರ್ನಾಕುಲಂ ಜಂಕ್ಷನ್-ಎಚ್.ನಿಝಾಮುದ್ದೀನ್ ಸೂಪರ್ಫಾಸ್ಟ್ ಸ್ಪೆಷಲ್ ರತ್ನಗಿರಿ ನಿಲ್ದಾಣ ದಲ್ಲಿ 9:10ಕ್ಕೆ, ನಂ.06346 ತಿರುವನಂತಪುರಂ ಸೆಂಟ್ರಲ್- ಲೋಕಮಾನ್ಯ ತಿಲಕ್ ಟರ್ಮಿನಲ್ ನೇತ್ರಾವತಿ ಎಕ್ಸ್ಪ್ರೆಸ್ ಸ್ಪೆಷಲ್ನ್ನು ರತ್ನಗಿರಿ ನಿಲ್ದಾಣದಲ್ಲಿ ತಡೆ ಹಿಡಿಯಲಾಯಿತು.







