800 ಮೆಟ್ರಿಕ್ ಟನ್ ಅಕ್ರಮ ಮರಳು ಪತ್ತೆ
ಮಂಗಳೂರು, ಡಿ.20: ಪರವಾನಿಗೆ ಇಲ್ಲದೇ ಖಾಸಗಿ ಜಾಗದಲ್ಲಿ ಸಂಗ್ರಹಿಸಲಾಗಿದ್ದ 800 ಮೆಟ್ರಿಕ್ ಟನ್ ಮರಳನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸ್ವಾಧೀನಪಡಿಸಿಕೊಳ್ಳಲಾದ ಮರಳನ್ನು ದ.ಕ. ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನಲಾದ ಖಚಿತ ಮಾಹಿತಿ ಮೇರೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಂಜಿತ್ ಕುಮಾರ್ ನೇತೃತ್ವದ ತಂಡವು ಟಿಪ್ಪರ್ನ್ನು ಬೆನ್ನಟ್ಟಿತು. ಈ ವಾಹನವು ಕೇರಳದ ಕಾಸರಗೋಡಿನ ವರ್ಕಾಡಿ ಗ್ರಾಮದ ತಲಕ್ಕಿ ಎಂಬಲ್ಲಿನ ಖಾಸಗಿ ಜಾಗದಲ್ಲಿರುವ ಮರಳು ಸಂಗ್ರಹ ಸ್ಥಳಕ್ಕೆ ತಲುಪಿತು. ಈ ವೇಳೆ ದಾಳಿ ನಡೆಸಿದ ಪೊಲೀಸರು 5.60 ಲಕ್ಷ ರೂ. ಮೌಲ್ಯದ 800 ಮೆಟ್ರಿಕ್ ಟನ್ ಮರಳು ಪತ್ತೆ ಹಚ್ಚಿದ್ದಾರೆ. ಈ ಜಾಗವು ತಲಕ್ಕಿ ರಫೀಕ್ ಎಂಬವರಿಗೆ ಸೇರಿದ್ದು, ಅವರ ಬಳಿ ಮರಳು ಸಂಗ್ರಹದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೆ ಇರುವುದು ತಿಳಿದುಬಂದಿದೆ. ಮರಳನ್ನು ಕರ್ನಾಟಕ ರಾಜ್ಯದಿಂದ ಅಕ್ರಮವಾಗಿ ಕೇರಳದ ಕಾಸರಗೋಡಿಗೆ ಸಾಗಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಸಂದರ್ಭ ಸ್ಥಳಕ್ಕೆ ಧಾವಿಸಿದ ದ.ಕ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳನ್ನು ಪರಿಶೀಲನೆ ನಡೆಸಿದ್ದು, ಅದು ನೇತ್ರಾವತಿ ನದಿಯಿಂದಲೇ ತೆಗೆದದ್ದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.