ಉಪವಾಸ ಸತ್ಯಾಗ್ರಹ ಆರಂಭಿಸಿದ ರೈತರು
ಮಾತುಕತೆಗೆ ದಿನಾಂಕ ನಿಗದಿಪಡಿಸಲು ಕೇಂದ್ರ ಸರಕಾರ ಸೂಚನೆ
ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯ ಸುತ್ತಮುತ್ತ ನವೆಂಬರ್ನಿಂದ ಆರಂಭವಾಗಿರುವ ರೈತರ ಪ್ರತಿಭಟನೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದು, ರೈತರು ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ರೈತ ನಾಯಕರೊಂದಿಗೆ ಈ ತನಕ ಐದು ಸುತ್ತುಗಳ ಮಾತುಕತೆ ನಡೆಸಿರುವ ಕೇಂದ್ರ ಸರಕಾರವು ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಪಡಿಸುವಂತೆ ಪ್ರತಿಭಟನಾನಿರತ ರೈತರಿಗೆ ರವಿವಾರ ತಿಳಿಸಿದೆ.
ಈ ತಿಂಗಳಾರಂಭದಲ್ಲಿ ದೇಶದ್ಯಾಂತ ಬಂದ್ ಆಚರಿಸಿದ ಬಳಿಕ ಉಪವಾಸ ಸತ್ಯಾಗ್ರಹವು ರೈತರ ಮೂರನೇ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ವಿಪಕ್ಷಗಳು ಹಾಗೂ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ನೀಡಿದ್ದವು. ಕಳೆದ ವಾರ ರೈತ ನಾಯಕರು ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಕನಿಷ್ಠ ಬೆಂಬಲ ಬೆಲೆ ಅಥವಾ ಎಂ ಎಸ್ ಪಿ ಕುರಿತು ಸರಕಾರ ಭರವಸೆ ನೀಡುತ್ತಿರುವ ಹೊರತಾಗಿಯೂ ರೈತ ನಾಯಕರು ಎಲ್ಲ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.