ಜಮ್ಮು-ಕಾಶ್ಮೀರದಲ್ಲಿ ಕಾನೂನಿನ ಆಡಳಿತವಿಲ್ಲ: ಮೆಹಬೂಬಾ ಮುಫ್ತಿ
ಇಬ್ಬರು ಹಿರಿಯ ಪಿಡಿಪಿ ನಾಯಕರ ಬಂಧನ
ಶ್ರೀನಗರ,ಡಿ.21: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಇಬ್ಬರು ಹಿರಿಯ ಪಿಡಿಪಿ ನಾಯಕರನ್ನು ಕೇಂದ್ರೀಯ ಸಂಸ್ಥೆಯೊಂದು ಸೋಮವಾರ ಬಂಧಿಸಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು,ಜಮ್ಮು-ಕಾಶ್ಮೀರದಲ್ಲಿ ಕಾನೂನಿನ ಆಡಳಿತವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನಿಖಾ ಸಂಸ್ಥೆಯ ಅಧಿಕಾರಿಗಳು ಮುಫ್ತಿಯವರ ಸೋದರಮಾವ ಸರ್ತಾಜ್ ಮದ್ನಿ ಮತ್ತು ಪೀರ್ಝಾದಾ ಮನ್ಸೂರ್ ಹುಸೇನ್ ಅವರನ್ನು ಅನಂತನಾಗ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಫಲಿತಾಂಶ ಘೋಷಣೆಗೆ ಮುನ್ನಾದಿನ ಮದ್ನಿ ಮತ್ತು ಹುಸೇನ್ ಅವರನ್ನು ನಿರಂಕುಶವಾಗಿ ಬಂಧಿಸಲಾಗಿದೆ. ಈ ಬಗ್ಗೆ ಇಲ್ಲಿಯ ಹಿರಿಯ ಅಧಿಕಾರಿಗಳಿಗೆ ಸುಳಿವು ಇಲ್ಲ. ಇದು ಮೇಲಿನಿಂದ ಬಂದಿರುವ ಆದೇಶ ಎಂದಷ್ಟೇ ಅವರು ಹೇಳುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕಾನೂನಿನ ಆಡಳಿತವಿಲ್ಲ,ಇರುವುದು ‘ಗೂಂಡಾ ರಾಜ್ ’ಎಂದು ಮುಫ್ತಿ ಟ್ವೀಟಿಸಿದ್ದಾರೆ.
ಭಯೋತ್ಪಾದನೆಗೆ ಹಣಕಾಸು ಪೂರೈಕೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಹಿರಿಯ ಪಿಡಿಪಿ ನಾಯಕ ಹಾಗೂ ಪಕ್ಷದ ಯುವ ಘಟಕದ ಮುಖ್ಯಸ್ಥ ವಹೀದ್ ಪಾರಾ ಅವರು ಸದ್ಯ ಎನ್ಐಎ ವಶದಲ್ಲಿದ್ದಾರೆ. ವಜಾಗೊಂಡಿರುವ ಡಿಎಸ್ಪಿ ದವಿಂದರ್ ಸಿಂಗ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.