ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಕೃಷಿ ಕಾನೂನು ಹಿಂಪಡೆಯಲು ಆಗ್ರಹಿಸಿದ ರೈತರು
ಹೊಸದಿಲ್ಲಿ: ರಾಷ್ಟ ರಾಜಧಾನಿಯ ಗಡಿಭಾಗದಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇದೀಗ ತಮ್ಮ ರಕ್ತದಲ್ಲೇ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಪ್ರಧಾನಿಯವರನ್ನು ಪತ್ರದಲ್ಲಿ ವಿನಂತಿಸಿದ್ದಾರೆ.
ದಿಲ್ಲಿ-ಹರ್ಯಾಣ ಗಡಿಯಲ್ಲಿ ಪಾರ್ಕ್ ಮಾಡಲಾಗಿರುವ ಮೊಬೈಲ್ ವ್ಯಾನ್ ನಲ್ಲಿ ರಕ್ತವನ್ನು ದಾನ ಮಾಡಿದ ರೈತರ ಗುಂಪು ತಮ್ಮ ರಕ್ತವನ್ನು ಬಳಸಿ ಪತ್ರವನ್ನು ಬರೆದಿದ್ದು, ಇದನ್ನು ಪ್ರಧಾನಿ ಮೋದಿಗೆ ಕಳುಹಿಸಿಕೊಡುವ ಯೋಜನೆ ಹಾಕಿದ್ದಾರೆ.
ಸೋಮವಾರ ಸಿಂಘು ಗಡಿಯಲ್ಲಿ ಕನಿಷ್ಠ ಎರಡು ಲುಧಿಯಾನ ಮೂಲದ ಬ್ಲಡ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗಿದೆ. ಜನರು ಇಲ್ಲಿ ರಕ್ತ ದಾನ ಮಾಡಿದ್ದಲ್ಲದೆ ಕೆಲವು ಪತ್ರಗಳನ್ನು ಬರೆದಿದ್ದಾರೆ. ಇದರಲ್ಲಿ ಕಪ್ಪು ಕಾನೂನುಗಳನ್ನ ಹಿಂಪಡೆಯಿರಿ ಎಂದು ಪತ್ರದಲ್ಲಿ ಬರೆದಿದ್ದಾರೆ. ಇನ್ನು ಕೆಲವು ಪತ್ರಗಳಲ್ಲಿ ರೈತರ ಹೆಸರುಗಳನ್ನು ಬರೆಯಲಾಗಿದೆ.
ನಾವು ಈ ಎಲ್ಲ ಪತ್ರಗಳನ್ನು ಪೋಸ್ಟ್ ಮುಖಾಂತರ ಅಥವಾ ವ್ಯಕ್ತಿಯ ಮುಖಾಂತರ ಪ್ರಧಾನಿಗೆ ಕಳುಹಿಸಿಕೊಡಲಿದ್ದೇವೆ ಎಂದು ಲುಧಿಯಾನದ ತರನ್ ಜೀತ್ ಸಿಂಗ್ ಹೇಳಿದ್ದಾರೆ.
ಬೆಳಗ್ಗೆ 9 ಗಂಟೆಗೆ ಆರಂಭವಾಗಿ ಆರು ಗಂಟೆಗಳ ಕಾಲ 30ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದ್ದಾರೆ.
ಜನರು ಇಲ್ಲಿ ರಕ್ತದಲ್ಲಿ ಪತ್ರವನ್ನು ಬರೆಯುತ್ತಿದ್ದಾರೆ ಎಂಬ ವಿಚಾರ ತಿಳಿದು ಅದನ್ನು ನೋಡಲು ಬಂದಿದ್ದೆವು. ನಾವು ಕೂಡ ರಕ್ತ ದಾನ ಮಾಡಿದ್ದೇವೆ. ಅಗತ್ಯವಿರುವವರಿಗೆ ಸಹಾಯಮಾಡುವುದಕ್ಕೆ ಇದಕ್ಕಿಂತ ಒಳ್ಳೆಯದು ಬೇರೇನಿದೆ ಎಂದು ಜಗದೀಪ್ ಸಿಂಗ್ ತಿಳಿಸಿದ್ದಾರೆ.