ಡಾ.ತುಕಾರಾಮ ಪೂಜಾರಿಗೆ ‘ಪೊಳಲಿ ಶೀನಪ್ಪಹೆಗ್ಡೆ -ಎಸ್.ಆರ್.ಹೆಗ್ಡೆ’ ಪ್ರಶಸ್ತಿ
![ಡಾ.ತುಕಾರಾಮ ಪೂಜಾರಿಗೆ ‘ಪೊಳಲಿ ಶೀನಪ್ಪಹೆಗ್ಡೆ -ಎಸ್.ಆರ್.ಹೆಗ್ಡೆ’ ಪ್ರಶಸ್ತಿ ಡಾ.ತುಕಾರಾಮ ಪೂಜಾರಿಗೆ ‘ಪೊಳಲಿ ಶೀನಪ್ಪಹೆಗ್ಡೆ -ಎಸ್.ಆರ್.ಹೆಗ್ಡೆ’ ಪ್ರಶಸ್ತಿ](https://www.varthabharati.in/sites/default/files/images/articles/2020/12/22/272205-1608646028.jpg)
ಉಡುಪಿ, ಡಿ.22: ಬಂಟ್ವಾಳ ತಾಲೂಕಿನ ಎಸ್.ವಿ.ಎಸ್. ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ನಿವೃತ್ತ ಉಪಪ್ರಾಂಶುಪಾಲ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸ್ಥಾಪಕ ಡಾ.ತುಕಾರಾಮ ಪೂಜಾರಿ 2020ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್.ಹೆಗ್ಡೆ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುತ್ತಿದ್ದು, ಪ್ರಶಸ್ತಿಯು 20,000ರೂ. ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜನವರಿ ತಿಂಗಳ ಎರಡನೆ ವಾರದಲ್ಲಿ ನಡೆಯಲಿದೆ ಎಂದು ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ತುಕಾರಾಮ ಪೂಜಾರಿ ಎಂ.ಎ, ಎಂ.ಫಿಲ್ ಶಿಕ್ಷಣದೊಂದಿಗೆ ಹಂಪಿ ಕನ್ನಡ ವಿವಿಯಿಂದ ‘ಕರಾವಳಿ ಕರ್ನಾಟಕದ ವಸ್ತ ಸಂಗ್ರಾಹಲಯ- ಸಾಂಸ್ಕೃತಿಕ ಇತಿಹಾಸ ಪುನರ್ರಚನೆಯ ಮಾದರಿಗಳು’ ಎಂಬ ವಿಷಯದ ಕುರಿತು ಪಿಎಚ್ಡಿ ಪದವಿ ಪಡೆದಿದ್ದಾರೆ. ಇವರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಾಹಲಯದ ಸ್ಥಾಪನೆ, ರಾಣಿ ಅಬ್ಬಕ್ಕ ಕಲಾ ಗ್ಯಾಲರಿ, ಎಸ್.ಯು.ಪಣಿಯಾಡಿ ಗ್ರಂಥಾಲಯ ಮತ್ತು ನಾಣ್ಯಶಾಸ್ತ್ರ ವಿಭಾಗದ ಸ್ಥಾಪಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಯುವಸಾಧಕ ಪ್ರಶಸ್ತಿ, ತುಳುಶ್ರೀ ಪ್ರಶಸ್ತಿ, ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಸ್ಕಂದಶ್ರೀ ಪ್ರಶಸ್ತಿ, ರಾಣಿ ಅಬ್ಬಕ್ಕ ಸೇರಿದಂತೆ ಹಲವು 35ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಎಂದು ಪ್ರಕಟಣೆ ತಿಳಿಸಿದೆ.