ಅಧಿಕೃತ ಮಾರಾಟಗಾರರಿಂದಲೇ ರಸಗೊಬ್ಬರ ಖರೀದಿಗೆ ಸೂಚನೆ
ಉಡುಪಿ, ಡಿ.23: ಜಿಲ್ಲೆಯಲ್ಲಿ 123 ಪರವಾನಿಗೆ ಹೊಂದಿದ ರಸಗೊಬ್ಬರ ಮಾರಾಟಗಾರರಿದ್ದು,ಅಧಿಕೃತವಾಗಿ ರಸಗೊಬ್ಬರ ಮಾರಾಟ ಮಾಡಲು ಅರ್ಹತೆ ಹೊಂದಿದ್ದಾರೆ. ಪರವಾನಿಗೆ ಹೊಂದಿದ ಮಾರಾಟಗಾರರು ತಮ್ಮ ಮಾರಾಟ ಮಳಿಗೆಯಲ್ಲಿ ಕೃಷಿ ಇಲಾಖೆಯಿಂದ ನೀಡಿದ ಪರವಾನಿಗೆ ಸಂಖ್ಯೆ ಹಾಗೂ ವಿವರಗಳ ಫಲಕವನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲಾಗುತ್ತಿದೆ. ಪ್ರತಿ ರಸಗೊಬ್ಬರ ಖರೀದಿಗೆ ಪಿಓಎಸ್ ಸಾಧನದಿಂದ ಮುದ್ರಿಸಿದ ಬಿಲ್ನ್ನು ನೀಡಲಾಗುತ್ತದೆ.
ಇಂತಹ ಪರವಾನಿಗೆ ಹೊಂದಿದ ಮಳಿಗೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅನಧಿಕೃತ ಮಾರಾಟಗಾರರು ಕಂಡುಬಂದಲ್ಲಿ ಅಂತಹ ವರಿಂದ ಗೊಬ್ಬರ ಖರೀದಿಸದೆ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಬೇಕು.
ಗ್ರಾಮಗಳಲ್ಲಿ ಕೆಲವು ಅನಧಿಕೃತ ಸಂಚಾರಿ ಮಾರಾಟಗಾರರು ಸಾವಯವ ಗೊಬ್ಬರ ಉತ್ಪನ್ನ ತೋರಿಸಿ ಖರೀದಿಸುವಂತೆ ರೈತರ ಮನ ಒಲಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಮಾರಾಟಗಾರರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಕಂಡುಬಂದಲ್ಲಿ ಅಂತಹವರಿಂದ ಗೊಬ್ಬರ ಖರೀದಿಸದೆ, ತಕ್ಷಣವೇ ಕೃಷಿ ಇಲಾಖೆಗೆ ದೂರು ನೀಡಬೇಕು.
ರೈತರ ಆಧಾರ್ ಕಾರ್ಡ್ ಆಧರಿಸಿ ರಸಗೊಬ್ಬರ ವಿತರಿಸುವ ವ್ಯವಸ್ಥೆ ಯಿರುವುದರಿಂದ ರೈತರು ರಸಗೊಬ್ಬರ ಖರೀದಿಗೆ ಆಧಾರ್ ಕಾರ್ಡ್ ತೆಗೆದು ಕೊಂಡು ಹೋಗುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.







