ಡಿ.25: ಅಟಲ್ ಜೀ ಸ್ಮರಣೆ

ಮಂಗಳೂರು, ಡಿ.23: ಕಿಸಾನ್ ಕಾರ್ಡ್ಗಳ ಮೂಲಕ ದೇಶದ ರೈತರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಅಂಗವಾಗಿ ಡಿ.25ರಂದು ರಾಜ್ಯಾದ್ಯಂತ ‘ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ’ಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಚುನಾವಣಾ ನೀತಿ ಸಂಹಿತೆ ಇಲ್ಲದ ಪ್ರದೇಶಗಳನ್ನು ಹೊರತುಪಡಿಸಿ ಅಂದು ಪೂರ್ವಾಹ್ನ 11 ಗಂಟೆಗೆ ದೇಶದೆಲ್ಲೆಡೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಗೆ ಸಂಬಂಧಿಸಿ ಮಂಗಳೂರಿನ ರಮಣ ಪೈ ಸಭಾಂಗಣದಲ್ಲಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ದೇಶದ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ದೇಶದ 9.5 ಕೋಟಿ ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂ. ಸಹಾಯಧನ ಜಮೆಯಾಗಲಿದ್ದು, ರೈತರ ಪಾಲಿಗೆ ಇದೊಂದು ಮಹತ್ವದ ದಿನವಾಗಲಿದೆ ಎಂದು ಹೇಳಿದರು.
ರೈತರ ಹೆಸರಿನಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ಹೊಸತೇನಲ್ಲ. ರಾಜಕೀಯ ಪಕ್ಷಗಳು ರೈತರ ಹೋರಾಟವನ್ನು ದುಪಯೋಗಪಡಿಸಿಕೊಳ್ಳುತ್ತಿವೆ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರೈತರಿಗೆ ಅರ್ಥಿಕ ನೆರವು ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ರೈತರಲ್ಲಿ ಆತ್ಮ ಸ್ಥೈರ್ಯ ತುಂಬಿದ್ದಾರೆ. ರೈತರು ಬೆಳೆದ ಬೆಳೆಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ ಪರಿಣಾಮ ರೈತರು ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ನಳಿನ್ ಹೇಳಿದರು.
ವಾಜಪೇಯಿ ಜನ್ಮದಿನದ ಅಂಗವಾಗಿ ಎಲ್ಲ ಜಿಲ್ಲೆ, ಮಂಡಲ ಹಾಗೂ ಶಕ್ತಿಕೇಂದ್ರಗಳಲ್ಲಿ ಬಿಜೆಪಿಯ ಎಲ್ಲ ಪದಾಧಿಕಾರಿಗಳು ಸ್ಥಳೀಯ ರೈತರನ್ನು ಆಹ್ವಾನಿಸಿ ಪ್ರಧಾನ ಮಂತ್ರಿಗಳ ಭಾಷಣದ ನೇರಪ್ರಸಾರವನ್ನು ಅವರೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಜೊತೆಗೆ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ಇರಲಿದೆ ಎಂದರು.
ಎಪಿಎಂಸಿ ಮತ್ತು ಸಹಕಾರಿ ಸಂಘ-ಸಂಸ್ಥೆಗಳಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರಧಾನ ಮಂತ್ರಿಗಳ ಭಾಷಣದ ಒಂದು ಗಂಟೆ ಮುಂಚಿತವಾಗಿ ಚುನಾಯಿತ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ರೈ ಸಭೆಗಳನ್ನು ಆಯೋಜಿಸಿ ಕೇಂದ್ರ ಸರ್ಕಾರ ಕೃಷಿ ಕಲ್ಯಾಣ ಕ್ಕಾಗಿ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕಾಗಿ ತೆಗೆದುಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವದು ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ ತಲಾ 2,000 ರೂಪಾಯಿಯಂತೆ 3 ಬಾರಿ ಒಟ್ಟು ಪ್ರತಿವರ್ಷ 6,000 ರೂ.ನ್ನು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 4,000 ರೂ.ಗಳನ್ನು ಸೇರಿಸಿ ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ನೀಡುವ ವ್ಯವಸ್ಥೆ ಮಾಡಿದ್ದಾರೆ. ಇವೆಲ್ಲವೂ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಇ-ಮಾರುಕಟ್ಟೆ ಸ್ಥಾಪನೆಯ ಮೂಲಕ ದೇಶಾದ್ಯಂತ ರೈತರನ್ನು ಮಾರುಕಟ್ಟೆಗೆ ಜೋಡಿಸಲಾಗಿದೆ. ರೈತರ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಜೋಡಣೆ ಮಾಡಲಾಗಿದೆ ಎಂದು ನಳಿನ್ ಯೋಜನೆಗಳ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ., ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಖಜಾಂಚಿ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.







