ಗೋವಾದಲ್ಲಿ ಬೀಫ್ ಕೊರತೆ: ಕರ್ನಾಟಕದ ದನ ಪೂರೈಕೆದಾರರೊಂದಿಗೆ ಗೋವಾ ಸಿಎಂ ಮಾತುಕತೆ
ಪಣಜಿ,ಡಿ.23: ಕರ್ನಾಟಕದಲ್ಲಿ ಗೋಹತ್ಯೆ ಮತ್ತು ಸಾಗಾಟ ನಿಷೇಧ ಮಸೂದೆಯು ಅಂಗೀಕಾರಗೊಂಡ ಬಳಿಕ ನೆರೆಯ ರಾಜ್ಯ ಗೋವಾದಲ್ಲಿ ಬೀಫ್ ಕೊರತೆಯು ಎದುರಾಗಿದೆ. ಗೋವಾದಲ್ಲಿ ಸದ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂದರ್ಭವಾಗಿದ್ದು, ಮಾಂಸ ಪೂರೈಕೆ ಮಾಡಲು ಪರ್ಯಾಯ ವ್ಯವಸ್ಥೆಯ ಸಾಧ್ಯತೆಗಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದ ಮಾಂಸ ಮಾರಾಟಗಾರರು ಹಾಗೂ ಕರ್ನಾಟಕದ ದನ ಪೂರೈಕೆದಾರರೊಂದಿಗೆ ಮಾತುಕತೆ ನಡೆಸಿದ್ದಾರೆಂದು indianexpress.com ವರದಿ ಮಾಡಿದೆ.
ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಗೋವಾಕ್ಕೆ ದನಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗೋವಾದ ಬೀಫ್ ಪ್ರಿಯರು ಮಹಾರಾಷ್ಟ್ರವನ್ನೇ ಆಶ್ರಯಿಸಿಕೊಂಡಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯು ಜಾರಿಯಾದ ಬಳಿಕ ಗೋವಾ ಕರ್ನಾಟಕವನ್ನೇ ನೆಚ್ಚಿಕೊಂಡಿತ್ತು. ಕರ್ನಾಟಕದಿಂದ ಎಮ್ಮೆ, ಎತ್ತು, ಹಸುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಕರ್ನಾಟಕದಿಂದಲೂ ಬೀಫ್ ಸಿಗದಿರುವುದೇ ಗೋವಾ ಮುಖ್ಯಮಂತ್ರಿ ಸೇರಿದಂತೆ ಮಾಂಸಪ್ರಿಯರ ಚಿಂತೆಗೆ ಕಾರಣವಾಗಿದೆ.
ಸದ್ಯ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದ ಮಾಂಸ ಮಾರಾಟಗಾರರು ಹಾಗೂ ಕರ್ನಾಟಕದ ದನ ಪೂರೈಕೆದಾರರೊಂದಿಗೆ ನಡೆಸಿದ ಮಾತುಕತೆಯ ಬಳಿಕ, “ಶೀಘ್ರದಲ್ಲೇ ಗೋವಾ ರಾಜ್ಯದಲ್ಲಿ ಉಂಟಾಗಿರುವ ಬೀಫ್ ಕ್ಷಾಮವನ್ನು ನಿವಾರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆಂದು ವರದಿ ತಿಳಿಸಿದೆ.