ಮೇಯರ್ ಆಗಿ ಆಯ್ಕೆಯಾಗಲಿರುವ 21 ರ ಹರೆಯದ ಕಾಲೇಜು ವಿದ್ಯಾರ್ಥಿನಿ
ತಿರುವನಂತಪುರಂ, ಡಿ.25: 21 ವರ್ಷದ ಕಾಲೇಜು ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ತಿರುವನಂತಪುರಂನ ಮೇಯರ್ ಆಗಿ ಆಯ್ಕೆಯಾಗಲಿದ್ದು, ಇವರು ದೇಶದ ಅತ್ಯಂತ ಕಿರಿಯ ಮೇಯರ್ ಎನಿಸಿಕೊಳ್ಳಲಿದ್ದಾರೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಸಿಪಿಐ(ಎಂ)ನ ಜಿಲ್ಲಾ ಸೆಕ್ರೆಟೀರಿಯೆಟ್ ಆರ್ಯರ ಹೆಸರನ್ನು ಮೇಯರ್ ಹುದ್ದೆಗೆ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಸಿಪಿಐ(ಎಂ) ರಾಜ್ಯ ಸಮಿತಿಯ ಅನುಮೋದನೆಗೆ ರವಾನಿಸಲಾಗಿದ್ದು, ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಪಕ್ಷದ ಮೂಲಗಳು ಹೇಳಿವೆ. ಸಿಪಿಐ(ಎಂ)ನ ಮಕ್ಕಳ ವಿಭಾಗ ‘ಬಾಲಸಂಗಮಮ್’ನ ರಾಜ್ಯಾಧ್ಯಕ್ಷೆಯಾಗಿರುವ ಆರ್ಯ ಇ್ತತೀಚೆಗೆ ನಡೆದ ಪೌರ ಸಂಸ್ಥೆ ಚುನಾವಣೆಯಲ್ಲಿ ಮುದುವನ್ಮುಗಲ್ ವಾರ್ಡ್ನಿಂದ ಗೆದ್ದು ಬಂದಿದ್ದರು. ಸಿಪಿಐ(ಎಂ) ನೇತೃತ್ವದ ಡೆಮಕ್ರಾಟಿಕ್ ಫ್ರಂಟ್ ತಿರುವನಂತಪುರಂ ನಗರಪಾಲಿಕೆಯಲ್ಲಿ ಸತತ ದ್ವಿತೀಯ ಅವಧಿಗೆ ಅಧಿಕಾರಕ್ಕೆ ಬಂದಿದೆ. ನಗರದ 100 ವಾರ್ಡ್ಗಳಲ್ಲಿ 51 ಸ್ಥಾನ ಗೆದ್ದುಕೊಂಡಿದೆ. ಆರ್ಯ ಅವರು ಆಲ್ ಸೈಂಟ್ಸ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಾರೆ. ಮೇಯರ್ ಹುದ್ದೆಗೆ ಆಯ್ಕೆಗೊಂಡ ಬಗ್ಗೆ ತನಗೆ ಪಕ್ಷದಿಂದ ಇದುವರೆಗೆ ಮಾಹಿತಿ ಬಂದಿಲ್ಲ ಎಂದವರು ಹೇಳಿದ್ದಾರೆ.