ಹೊಸ ವರ್ಷಚಾರಣೆಯಿಂದ ಹೆಚ್ಚುತ್ತಿರುವ ರಸ್ತೆ ಅಪಘಾತಗಳು; ಜೀವಹಾನಿ ತಡೆಯಲು ಎಂಟು ‘108 ಆ್ಯಂಬುಲೆನ್ಸ್’ ನಿಯೋಜನೆ
ಉಡುಪಿ, ಡಿ.26: ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಎಂಟು ಆ್ಯಂಬುಲೆನ್ಸ್ ಗಳನ್ನು ತಜ್ಞ ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ.
ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಸರಾಸರಿ ಶೇ.30 ರಿಂದ 35ರಷ್ಟು ಅಪಘಾತ ಪ್ರಕರಣಗಳು ವರದಿಯಾಗಿವೆ. 108 ಆ್ಯಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರ ವನ್ನು ಹೊಂದಿದೆ ಎಂದು ಜಿಲ್ಲಾ ವ್ಯವಸ್ಥಾಪಕರಾದ ಮಹಾಬಲ ತಿಳಿಸಿದ್ದಾರೆ.
ಹೆಚ್ಚಿನ ತುರ್ತು ಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ನಿಯೋಜಿಸಲಾಗುವುದು. ಹೆಚ್ಚುವರಿ ಸೇವೆಗಾಗಿ ಆ್ಯಂಬುಲೆನ್ಸ್ ಸಿಬ್ಬಂದಿಯ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತ ವಾಗಿಯೇ ಎಲ್ಲಾ ಆಂಬುಲೆನ್ಸ್ನಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಗಳಲ್ಲಿ 108 ಫ್ರೀ ಸಂಖ್ಯೆ ಡಯಲ್ ಮಾಡಬಹುದು. ಗಂಭೀರವಾಗಿ ಗಾಯಗೊಂಡು ನರಳುತ್ತಿರುವ ಗಾಯಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಗಳು ಲಭ್ಯ ಇರುತ್ತದೆ. ಹೆಚ್ಚಿನ ಸಂಖ್ಯೆ ಸಾವು -ನೋವುಗಳು ಅನಾಹುತಗಳ ಮಾಹಿತಿ ಯನ್ನು ಪೊಲೀಸ್ ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







