ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಿಜವಾದ ರೈತರೇ ಅಲ್ಲ ಎಂದೆನಿಸುತ್ತದೆ: ಪೇಜಾವರಶ್ರೀ

ಬಾಗಲಕೋಟೆ, ಡಿ.27: ದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ನಿಜವಾದ ರೈತರೇ ಅಲ್ಲ ಎಂದೆನಿಸುತ್ತದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸುವ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮಗನಿಸಿದಂತೆ ಇಂದು ದೇಶದಲ್ಲಿ ನಡೆಯುತ್ತಿರುವುದು ರೈತರ ಚಳವಳಿ ಅಲ್ಲ. ಅದರ ಮುಖವಾಡದಲ್ಲಿ ಇನ್ನೇನೋ ನಡಿತಾ ಇದ್ದು, ಹಾಗಾಗಬಾರದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಪರಿಹಾರಕ್ಕೆ ಚಳವಳಿ ನಿರತರನ್ನು ಮಾತುಕತೆಗೆ ಬರುವಂತೆ ಕರೆಯುತ್ತಲೇ ಇದ್ದಾರೆ. ಇದಕ್ಕೆ ಒಪ್ಪದೆ ಇನ್ನೇನೋ ಮಾಡಬೇಕು ಎಂದು ಅವರು ಹೇಳುತ್ತಿರುವುದರಿಂದ ಚಳವಳಿ ದಿಕ್ಕು ತಪ್ಪಿ ಹೋಗಿದೆ. ಹೀಗಾಗಿ ಈ ಚಳವಳಿಗೆ ನಮ್ಮ ಸಂಪೂರ್ಣ ಸಹಮತಿ ಇಲ್ಲ ಎಂದರು.
ಮಾಧ್ಯಮಗಳಲ್ಲಿ ಬಿತ್ತರವಾಗುವ ದೈನಂದಿನ ಸುದ್ಧಿ ನೋಡಿದರೆ ರೈತರೇ ಚಳವಳಿ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆಯೇ ನಮಗೆ ಸಂಶಯ ಇದೆ. ಮಾಧ್ಯಮಗಳನ್ನು ನೋಡಿ ಹೇಳೋದಾದ್ರೆ ಅಲ್ಲಿರೋದು ಪರೋಕ್ಷವಾಗಿ ರೈತರೇ ಅಲ್ಲ ಎಂದೆನಿಸುತ್ತದೆ ಎಂದು ಸ್ವಾಮೀಜಿ ತಿಳಿಸಿದರು.





