ಬೆಂಗಳೂರಿನಲ್ಲಿ ‘ಮೊಳೆ ಮುಕ್ತ ಮರಗಳು’ ಅಭಿಯಾನ: 280 ಮರಗಳಿಂದ 3 ಸಾವಿರ ಮೊಳೆ ತೆಗೆದ ತಂಡ
ಬೆಂಗಳೂರು, ಡಿ.28: ನಗರದಲ್ಲಿ ವಿನೋದ್ರ ನೇತೃತ್ವದ ತಂಡ ಕಳೆದ ಒಂದೂವರೆ ತಿಂಗಳಿನಿಂದ ಮರಗಳಿಂದ ಮೊಳೆಗಳನ್ನು ತೆಗೆಯುವಂತಹ ‘ಮೊಳೆ ಮುಕ್ತ ಮರಗಳು’ ಅಭಿಯಾನದ ಅಡಿಯಲ್ಲಿ ಇದುವರೆಗೂ 280 ಮರಗಳಿಂದ ಮೂರು ಸಾವಿರ ಮೊಳೆಗಳನ್ನು ತೆಗೆದು ಹಾಕಿದ್ದಾರೆ.
ಅಭಿಯಾನ ನಡೆಸುತ್ತಿರುವ ತಂಡವು ‘ಮರಗಳಿಗೂ ಜೀವವಿದೆ’ ಎಂದು ಘೋಷವಾಕ್ಯವಾಗಿಸಿಕೊಂಡಿದ್ದಾರೆ. ಮರಗಳನ್ನು ಮನುಷ್ಯರು ಜೀವಿಗಳಂತೆ ಕಾಣುವುದಿಲ್ಲ. ಮರಗಳಿಗೆ ಮೊಳೆಗಳನ್ನು, ಪಿನ್ಗಳನ್ನು ಚುಚ್ಚುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ, ಸಮಾನ ಮನಸ್ಕರು ಸೇರಿ ಪ್ರತಿ ಶನಿವಾರ, ರವಿವಾರ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿನೋದ್ ಅಭಿಪ್ರಾಯಿಸಿದ್ದಾರೆ.
ಮೊಳೆ ಹೊಡೆಯುವುದಲ್ಲದೆ, ಮರಕ್ಕೆ ತಂತಿಯನ್ನು ಸುತ್ತಿರುತ್ತಾರೆ. ಮರ ಬೆಳೆದಂತೆ ತಂತಿಯು ಬಿಗಿಯಾಗುತ್ತದೆ. ಇದರಿಂದ ಮರದ ಬೆಳವಣಿಗೆಗೆ ತೊಡಕುಂಟಾಗುತ್ತದೆ. ಬೇರಿನಿಂದ ನೀರು ಮತ್ತಿತರ ಅಂಶಗಳು ರೆಂಬೆಗಳಿಗೆ ಪೂರೈಕೆಯಾಗುವುದಿಲ್ಲ. ಆಗ ಮರಗಳು ಮುರಿದು ಬೀಳುತ್ತಿವೆ. 100 ವರ್ಷ ಆಯಸ್ಸು ಹೊಂದಿರುವ ಮರಗಳು 70 ವರ್ಷಕ್ಕೇ ಮುರಿದು ಬೀಳುತ್ತಿವೆ. ಅಲ್ಲದೆ, ನಗರದಲ್ಲಿ ಮರಗಳು ಬಿದ್ದು ವರ್ಷಕ್ಕೆ 30ರಿಂದ 40 ಜನ ಸಾವಿಗೀಡಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದಂಡ ಬೀಳುತ್ತದೆ: ಕಾನೂನಿನಲ್ಲಿ ಮರಗಳಿಗೆ ಮೊಳೆ ಹೊಡೆದರೆ ದಂಡ ವಿಧಿಸಲೂ ಅವಕಾಶವಿದೆ. ಮೊಳೆ ಹೊಡೆಯುವ ಸಂದರ್ಭದಲ್ಲಿ ನೇರವಾಗಿ ಸಿಕ್ಕಿಬಿದ್ದರೆ ಬಿಬಿಎಂಪಿಯು ದಂಡ ವಿಧಿಸಲಾಗುತ್ತದೆ. ಮೊಳೆ ಹಾಕಿದವರ ವಿರುದ್ಧ ದೂರು ನೀಡಲು ಮತ್ತು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ನಾವು ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿದ್ದೆವು. ಅವರು ಈಗಿನ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲಿಯೇ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಸೂಚನೆ ತಲುಪಲಿದೆ. ಇದರಿಂದ ನಾವು ದೂರು ನೀಡಲು ಸಹಾಯವಾಗುತ್ತದೆ. ದೂರು ದಾಖಲಾದರೆ ದಂಡ ವಿಧಿಸಲು ಬಿಬಿಎಂಪಿಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.







