ನ್ಯಾಯವಾದಿಗೆ ಪೊಲೀಸರು ಥಳಿಸಿದ ಆರೋಪ: ವರದಿ ಕೇಳಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್,ಡಿ.29: ಜಿಲ್ಲೆಯ ಇಟಾದಲ್ಲಿ ನ್ಯಾಯವಾದಿ ಯೋರ್ವರನ್ನು ಪೊಲೀಸರು ಮನೆಯಿಂದ ಹೊರಗೆಳೆದು ಥಳಿಸಿದ್ದಾರೆ ಎಂದು ಆರೋಪಿಸಿ ಉತ್ತರಪ್ರದೇಶ ಬಾರ್ ಕೌನ್ಸಿಲ್ ಸಲ್ಲಿಸಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಘಟನೆಯ ಬಗ್ಗೆ 2021,ಜ.8ರೊಳಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಇಟಾದ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್(ಸಿಜೆಎಂ) ಅವರಿಗೆ ಮಂಗಳವಾರ ನಿರ್ದೇಶ ನೀಡಿದೆ.
ಆಡಿಯೊ ಮತ್ತು ವೀಡಿಯೊ ವಿದ್ಯುನ್ಮಾನ ದಾಖಲೆಗಳು ಸೇರಿದಂತೆ ಲಭ್ಯವಿರುವ ಎಲ್ಲ ಸಂಬಂಧಿತ ಮಾಹಿತಿಗಳನ್ನು ಪಡದುಕೊಂಡು ಅಗತ್ಯ ವಿಚಾರಣೆಯನ್ನು ನಡೆಸಿ ವರದಿಯನ್ನು ಸಿದ್ಧಪಡಿಸುವಂತೆ ಮು.ನ್ಯಾ.ಗೋವಿಂದ ಮಾಥೂರ್ ನೇತೃತ್ವದ ಪೀಠವು ಸಿಜೆಎಮ್ಗೆ ಸೂಚಿಸಿದೆ.
ಡಿ.21ರಂದು ಇಟಾದಲ್ಲಿ ಸ್ಥಳೀಯ ನ್ಯಾಯವಾದಿ ರಾಜೇಂದ್ರ ಶರ್ಮಾ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರು ಅವರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು. ಅವರ ಬಂಧುಗಳಿಗೂ ಕಿರುಕುಳ ನೀಡಿದ್ದಾರೆ,ಅವಮಾನಿಸಿದ್ದಾರೆ ಎಂದು ದೂರಿಕೊಂಡು ಬಾರ್ ಕೌನ್ಸಿಲ್ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿತ್ತು.





