ಜನರ ಜೀವನದಲ್ಲಿ ಸಂತೋಷ ತರುವುದೇ ವಿಜ್ಞಾನದ ಅಂತಿಮ ಗುರಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಬೆಂಗಳೂರು, ಡಿ.29: ಜನರ ಜೀವನವನ್ನು ಹಿತಕರವಾಗಿಸುವುದು ಮತ್ತು ಅವರ ಬದುಕಿನಲ್ಲಿ ಸಂತೋಷ ತರುವುದೇ ವಿಜ್ಞಾನದ ಅಂತಿಮ ಗುರಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಭಾರತೀಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನ ಸಂಸ್ಥೆಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಶಿಕ್ಷಣ ಕೇಂದ್ರ CREST)ದಲ್ಲಿ ಎರಡು ಸೌಲಭ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನ ಸಂಸ್ಥೆಯ ಪರಿಸರ ಪರೀಕ್ಷಾ ಸೌಲಭ್ಯವು ಸಣ್ಣ ಪೇಲೋಡ್ಗಳನ್ನು ಬಾಹ್ಯಾಕಾಶಕ್ಕೆ ಸೇರಿಸಲು ನೆರವಾಗುತ್ತದೆ. ಸಣ್ಣ ಪೇಲೋಡ್ಗಳನ್ನು ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳು ಇದನ್ನು ಬಳಸಲು ಮುಕ್ತಗೊಳಿಸಲಾಗುತ್ತದೆ. ಈ ಸೌಲಭ್ಯಗಳು ಭವಿಷ್ಯದಲ್ಲಿ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಭವಿಷ್ಯದ ಪೀಳಿಗೆಗೆ ಮೂಲಭೂತ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಬದ್ಧತೆಗೆ ಈ ಸಂಸ್ಥೆಯು ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಇದು ಆತ್ಮನಿರ್ಭರ ಭಾರತಕ್ಕೆ ಅಡಿಪಾಯವಾಗಿದೆ ಎಂದು ಅವರು ಹೇಳಿದರು.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರವು ಅಮೆರಿಕದ ಹವಾಯಿಯಲ್ಲಿ ಮೂವತ್ತು ಮೀಟರ್ ದೂರದರ್ಶಕವನ್ನು ನಿರ್ಮಿಸಲು ಜಪಾನ್, ಚೀನಾ, ಕೆನಡಾ ಮತ್ತು ಅಮೆರಿಕಾದೊಂದಿಗೆ ಭಾರತವೂ ಸೇರಿಕೊಳ್ಳಲು ಅನುಮೋದನೆ ನೀಡಿತು. ಈ ಅಂತರ್ರಾಷ್ಟ್ರೀಯ ಪ್ರಯತ್ನದ ಸಾಕಾರಕ್ಕಾಗಿ ಸೌಲಭ್ಯವನ್ನು ಇಂದು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಇಂತಹ ಬೃಹತ್ ವೈಜ್ಞಾನಿಕ ಯೋಜನೆಗಳಲ್ಲಿ ಭಾಗವಹಿಸುವಿಕೆಯು ಭಾರತೀಯ ವಿಜ್ಞಾನಿಗಳಿಗೆ ಉತ್ತಮ ಭೂಮಿಕೆಯನ್ನು ಒದಗಿಸುತ್ತದೆ ಮತ್ತು ಉನ್ನತ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉದ್ಯಮಗಳಿಗೆ ಸಹಾಯ ಮಾಡುತ್ತದೆ. ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯು ಖಗೋಳ ಸಂಶೋಧನೆಯಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ವೈಜ್ಞಾನಿಕ ಜ್ಞಾನಕ್ಕೆ ಸಮೃದ್ಧ ಕೊಡುಗೆ ನೀಡಿದೆ. ಸೂರ್ಯನಲ್ಲಿ ಹೀಲಿಯಂ ಅಂಶದ ಉಪಸ್ಥಿತಿ ಮತ್ತು ಯುರೇನಸ್ ಗ್ರಹದ ಸುತ್ತ ಉಂಗುರಗಳು ಸೇರಿದಂತೆ ಅನೇಕ ಪ್ರಮುಖ ಆವಿಷ್ಕಾರಗಳಲ್ಲಿ ಈ ಸಂಸ್ಥೆ ಕೆಲಸ ಮಾಡಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.
ಖಗೋಳ ವಿಜ್ಞಾನವು ಸಮಾಜಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನ ನೀಡಿದೆ. ಖಗೋಳ ವಿಜ್ಞಾನದಿಂದ ಕೈಗಾರಿಕೆ, ಬಾಹ್ಯಾಕಾಶ ಮತ್ತು ಇಂಧನ ಕ್ಷೇತ್ರಗಳಿಗೆ ಅಪಾರ ಪ್ರಮಾಣದ ತಂತ್ರಜ್ಞಾನ ವರ್ಗಾವಣೆಯಾಗಿದೆ. ಇಂದು ನಾವು ಲೀಲಾಜಾಲವಾಗಿ ಬಳಸುವ ಅನೇಕ ತಂತ್ರಜ್ಞಾನಗಳು-ಎಕ್ಸ್ರೇ ಯಂತ್ರಗಳು, ನಿಖರ ಗಡಿಯಾರಗಳು, ಸೂಪರ್ ಕಂಪ್ಯೂಟರ್ ಗಳು, ಉಪಗ್ರಹ ಸಂಪರ್ಕ, ಜಿಪಿಎಸ್- ಇವೆಲ್ಲವೂ ಖಗೋಳ ವಿಜ್ಞಾನದ ಸಂಶೋಧನೆಯ ಫಲಗಳಾಗಿವೆ. ಖಗೋಳ ವಿಜ್ಞಾನವು ಹಲವಾರು ಅಂತರ್ರಾಷ್ಟ್ರೀಯ ಯೋಜನೆಗಳ ಮೂಲಕ ಜನರು ಮತ್ತು ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತಿದೆ ಎಂದು ಉಪ ರಾಷ್ಟ್ರಪತಿ ಹೇಳಿದರು.
ಖಗೋಳ ಅಧ್ಯಯನಗಳು ಭೂಮಿಯ ವಾತಾವರಣದ ವಿಕಸನ ಮತ್ತು ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂಶಗಳು ಮತ್ತು ಅದನ್ನು ಪರಿಹರಿಸಲು ಅಗತ್ಯವಾದ ಹಂತಗಳ ಕುರಿತು ಇದು ನಮಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಸಾಗುತ್ತಿದೆ. ಕ್ಷಕಿರಣ ಮತ್ತು ಅತಿ ನೇರಳೆ ಕಿರಣಗಳ ಬಗ್ಗೆ ಸಮೀಕ್ಷೆ ಮಾಡಲು ಇಸ್ರೊದ ಬಾಹ್ಯಾಕಾಶ ಮಿಷನ್ “ಮಂಗಳಯಾನ” ಮತ್ತು ಭಾರತದ ಖಗೋಳ ವಿಜ್ಞಾನ ವೀಕ್ಷಣಾಲಯ ಆಸ್ಟ್ರೋಸಾಟ್ (ಖಗೋಳ ವಿಜ್ಞಾನ ಉಪಗ್ರಹ) ಮತ್ತು ಶೀಘ್ರದಲ್ಲೇ ಉಡಾವಣೆಯಾಗಲಿರುವ ಆದಿತ್ಯ ಎಲ್ 1, ಸೌರ ಅಧ್ಯಯನ ಮಿಷನ್ ಕುರಿತು ಹೆಚ್ಚು ಮಾತನಾಡಲಾಗುತ್ತಿದೆ ಎಂದು ಅವರು ಹೇಳಿದರು.
ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರದಲ್ಲಿ ಬಾಹ್ಯಾಕಾಶದಲ್ಲಿ ಕಕ್ಷೆಗೆ ಸೇರಿಸಲಾಗುವ ಆದಿತ್ಯ ಮಿಷನ್ ಸೂರ್ಯನ ಬಗ್ಗೆ ಅಭೂತ ಪೂರ್ವವಾದ ತಿಳುವಳಿಕೆಯನ್ನು ಒದಗಿಸುತ್ತದೆ. ಮಕ್ಕಳು ಮತ್ತು ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಜಾಗೃತಿ ಮೂಡಿಸಲು ಈ ಕ್ಯಾಂಪಸ್ನಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವ ಯೋಜನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯು ರಾಷ್ಟ್ರ ಸೇವೆಯಲ್ಲಿ 50 ವರ್ಷಗಳನ್ನು ಆಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಉಪರಾಷ್ಟ್ರಪತಿ, ಭವಿಷ್ಯದ ಪೀಳಿಗೆಗೆ ಪ್ರಮುಖ ವೈಜ್ಞಾನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಾಡಿರುವ ಅದ್ಭುತ ಕೆಲಸಗಳಿಗಾಗಿ ವಿಜ್ಞಾನಿಗಳು ಮತ್ತು ಇಂಜಿನಿಯರ್ಸ್ಗಳಿಗೆ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಒದಗಿಸಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪರಮಾಣುಶಕ್ತಿ ಇಲಾಖೆ ಮತ್ತು ಇಸ್ರೋ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







