ದ.ಕ. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ
![ದ.ಕ. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ ದ.ಕ. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ](https://www.varthabharati.in/sites/default/files/images/articles/2020/12/30/273156-1609302534.gif)
ಮಂಗಳೂರು, ಡಿ.30: ದ.ಕ. ಜಿಲ್ಲೆಯ ಏಳು ತಾಲೂಕಿನ 220 ಗ್ರಾಮ ಪಂಚಾಯತ್ಗಳಿಗೆ ಎರಡು ಹಂತದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಗ್ಗೆ ಆರಂಭಗೊಂಡಿದೆ.
ಮಂಗಳೂರು ತಾಲೂಕಿನ 37, ಮೂಡುಬಿದಿರೆಯ 12, ಬಂಟ್ವಾಳದ 57, ಬೆಳ್ತಂಗಡಿಯ 46, ಪುತ್ತೂರಿನ 22, ಸುಳ್ಯದ 26, ಕಡಬದ 21 ಸಹಿತ ಜಿಲ್ಲೆಯ 220 ಗ್ರಾಪಂನ 3,172 ವಾರ್ಡ್ಗಳಲ್ಲಿ 7,275 ಅಭ್ಯರ್ಥಿಗಳು ಕಣದಲ್ಲಿದ್ದರು. 91 ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು.
ಮತಪತ್ರದ ಮೂಲಕ ಚುನಾವಣೆ ನಡೆದ ಕಾರಣ ಜಿಲ್ಲೆಯ ಸಂಪೂರ್ಣ ಫಲಿತಾಂಶದ ಚಿತ್ರಣ ಹೊರ ಬೀಳುವಾಗ ರಾತ್ರಿಯಾಗುವ ಸಾಧ್ಯತೆ ಇದೆ.
ಮತ ಎಣಿಕೆ ಕೇಂದ್ರಗಳು: ಮಂಗಳೂರು ತಾಲೂಕಿನ ಮತ ಎಣಿಕೆಯು ನಗರದ ಬೋಂದೆಲ್ನ ಮಹಾತ್ಮಾ ಗಾಂಧಿ ಸೆಂಟಿನರಿ ಪಿಯು ಕಾಲೇಜು, ಮೂಡುಬಿದಿರೆ ತಾಲೂಕಿನ ಮತ ಎಣಿಕೆಯು ಮಹಾವೀರ ಕಾಲೇಜು, ಬಂಟ್ವಾಳ ತಾಲೂಕಿನ ಮತ ಎಣಿಕೆಯು ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲಮಾಧ್ಯಮ ಶಾಲೆ, ಬೆಳ್ತಂಗಡಿ ತಾಲೂಕಿನ ಮತ ಎಣಿಕೆಯು ಉಜಿರೆಯ ಎಸ್ಡಿಎಂ ಕಾಲೇಜು, ಪುತ್ತೂರು ತಾಲೂಕಿನ ಮತ ಎಣಿಕೆಯು ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆ, ಕಡಬ ತಾಲೂಕಿನ ಮತ ಎಣಿಕೆಯು ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ, ಸುಳ್ಯ ತಾಲೂಕಿನ ಮತ ಎಣಿಕೆಯು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ. ಒಟ್ಟು 220 ಗ್ರಾಪಂಗಳಿಗೆ ಸಂಬಂಧಿಸಿದಂತೆ 113 ಮತ ಎಣಿಕೆ ಕೊಠಡಿಗಳು ಮತ್ತು 382 ಮತ ಎಣಿಕೆ ಟೇಬಲ್ಗಳನ್ನು ಅಳವಡಿಸಲಾಗಿದೆ.
ಪುತ್ತೂರು: ತಾಲೂಕಿನ 22 ಗ್ರಾಪಂನ 322 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8ರಿಂದ ಪುತ್ತೂರಿನ ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆಯುತ್ತಿದೆ.
12 ಕೊಠಡಿಗಳಲ್ಲಿ 39 ಮೇಜುಗಳಲ್ಲಿ ಎಣಿಕೆ ನಡೆಯುತ್ತಿದೆ. ಒಟ್ಟು 3 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯುತ್ತಿದ್ದು, 11 ಗಂಟೆಗೆ ಮೊದಲ ಸುತ್ತುಗಳ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಕಡಬ: ಕಡಬ ತಾಲೂಕಿನ 21 ಗ್ರಾಪಂಗಳ 91 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಡಬ ಸೈಂಟ್ ಜೋಕಿಮ್ಸ್ ಕಾಲೇಜಿನಲ್ಲಿ ಆರಂಭಗೊಂಡಿದೆ.
ಇಲ್ಲಿ ಒಟ್ಟು 285 ಸ್ಥಾನಗಳಿಗೆ 642 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಡಬ ತಾಲೂಕು ಕೇಂದ್ರವಾದ ಬಳಿಕ ಇದೇ ಮೊದಲ ಬಾರಿಗೆ ಕಡಬದಲ್ಲೇ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೇ ಮತ ಎಣಿಕಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.