ಗ್ರಾಪಂ ಚುನಾವಣೆ : ಉಡುಪಿ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ
![ಗ್ರಾಪಂ ಚುನಾವಣೆ : ಉಡುಪಿ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ ಗ್ರಾಪಂ ಚುನಾವಣೆ : ಉಡುಪಿ ಜಿಲ್ಲೆಯ ಏಳು ಕೇಂದ್ರಗಳಲ್ಲಿ ಮತ ಎಣಿಕೆ](https://www.varthabharati.in/sites/default/files/images/articles/2020/12/30/273215-1609338758.jpg)
ಉಡುಪಿ, ಡಿ.30: ಉಡುಪಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯವು ಆಯಾ ತಾಲೂಕಿನ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಇಂದು ನಡೆಯಿತು.
ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಸಿಬ್ಬಂದಿಗಳು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ, ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು. ಬಳಿಕ 8ಗಂಟೆಗೆ ಆಯಾ ತಾಲೂಕಿನ ತಹಶೀಲ್ದಾರ್ ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ಗಳನ್ನು ತೆರೆಯಲಾಯಿತು. ಬಳಿಕ ಗ್ರಾಪಂ ಕ್ಷೇತ್ರವಾರು ಮತ ಎಣಿಕೆ ಕಾರ್ಯವು ಆರಂಭಗೊಂಡಿತು. ಬ್ಯಾಲೆಟ್ ಪೇಪರ್ ಆಗಿರುವುದರಿಂದ ನಿಧನಗತಿಯಲ್ಲಿ ಫಲಿತಾಂಶ ಹೊರ ಬರುತ್ತಿದ್ದು, ರಾತ್ರಿಯವರೆಗೂ ಮತ ಎಣಿಕೆ ಕಾರ್ಯ ಮುಂದುವರೆದಿತ್ತು.
ಮತ ಎಣಿಕೆ ಕೇಂದ್ರಗಳಾದ ಉಡುಪಿ ಬ್ರಹ್ಮಗಿರಿ ಸೈಂಟ್ ಸಿಸಿಲಿಸ್ ಶಾಲೆ, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ಎಸ್ಎಂಎಸ್ ಪದವಿ ಪೂರ್ವ ಕಾಲೇಜು, ಕುಂದಾಪುರ ಭಂಡಾಕಾರ್ಸ್ ಕಾಲೇಜು, ಕಾರ್ಕಳ ಮಂಜು ನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳ ಸಮೀಪ ಅಭ್ಯರ್ಥಿಗಳು, ಬೆಂಬಲಿ ಗರು, ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರತಿಯೊಬ್ಬರನ್ನು 2 ಹಂತದಲ್ಲಿ ಪರಿಶೀಲನೆ ನಡೆಸಿ, ಪಾಸ್ ಇದ್ದವರಿಗೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಆಶಾಕಾರ್ಯಕರ್ತೆರು ಕೇಂದ್ರಕ್ಕೆ ಆಗಮಿ ಸುವ ಪ್ರತಿಯೊಬ್ಬರ ದೇಹದ ಉಷ್ಣಾಂಶವನ್ನು ಪರಿಶೀಲಿಸಿದರು. ನೂತನವಾಗಿ ರಚನೆಯಾದ ಕಾಪು, ಬ್ರಹ್ಮಾವರ, ಹೆಬ್ರಿ ಹಾಗೂ ಬೈಂದೂರು ತಾಲೂಕುಗಳಲ್ಲಿ ಮೊದಲ ಬಾರಿಗೆ ಮತ ಎಣಿಕೆ ಕಾರ್ಯ ನಡೆದರೂ ಎಲ್ಲವೂ ವ್ಯವಸ್ಥಿತವಾಗಿ ಮಾಡಲಾಗಿತ್ತು.
ಮತ ಎಣಿಕೆ ಕೇಂದ್ರಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಭರತ್ ರೆಡ್ಡಿ ಮೊದಲಾದ ಅಧಿಕಾರಿಗಳು ಭೇಟಿ ನೀಡಿ ಮತ ಎಣಿಕೆ ಪ್ರಕ್ರಿಯೆ ಹಾಗೂ ಭದ್ರತೆಯನ್ನು ಪರಿಶೀಲಿಸಿದರು. ಮತ ಎಣಿಕೆ ಕೇಂದ್ರಗಳಿಗೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ ಮಾಡ ಲಾಗಿತ್ತು.
ಮತ ಎಣಿಕೆ ಕೇಂದ್ರದ 200ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ರುವುದರಿಂದ ಎಲ್ಲೂ ಯಾವುದೇ ವಿಜಯೋತ್ಸವ, ಪಟಾಕಿ ಸಿಡಿಸಿ ಸಂಭ್ರಮಿ ಸಿರುವ ಬಗ್ಗೆ ವರದಿಯಾಗಿಲ್ಲ. ಈ ಸಂಬಂಧ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ. ವಿಜೇತರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸಿ ರುವ ಬಗ್ಗೆ ವರದಿಯಾಗಿದೆ.
ಗ್ರಾಪಂಗೆ ಸ್ಪರ್ಧಿಸಿದ್ದ ಜಿಪಂ ಮಾಜಿ ಅಧ್ಯಕ್ಷ !
ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಒಂದು ಅವಧಿಗೆ ಜಿಪಂ ಅಧ್ಯಕ್ಷರಾಗಿದ್ದ ಉಪೇಂದ್ರ ನಾಯಕ್ ಈ ಬಾರಿ 80 ಬಡಗಬೆಟ್ಟು ಗ್ರಾಪಂನ 80 ಬಡಗಬೆಟ್ಟು -6 ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪರ್ಕಳ ಮಂಡಲ ಪಂಚಾಯತ್ನಲ್ಲಿ ಸದಸ್ಯರಾಗಿ, ನಾಲ್ಕು ಬಾರಿ ಗ್ರಾಪಂ ಸದಸ್ಯರಾಗಿ, ಆ ಅವಧಿಯಲ್ಲಿ ಎರಡು ಬಾರಿ ಗ್ರಾಪಂ ಅಧ್ಯಕ್ಷರಾಗಿದ್ದರು. ಅದೇ ರೀತಿ ಎರಡು ಬಾರಿ ಜಿಪಂ ಸದಸ್ಯರಾಗಿ, 2012ರಲ್ಲಿ ಜಿಪಂ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು.
‘ಮುಂದೆ ಈ ಪಂಚಾಯತ್ ನಗರಸಭೆಗೆ ಸೇರುವ ಸಾಧ್ಯತೆ ಇದೆ. ಆದು ದರಿಂದ ಸ್ಪರ್ಧಿಸುವ ಒಲವು ಮಾಡಿದ್ದೇನೆ. ಆ ಮೂಲಕ ಗ್ರಾಮದ ಅಭಿವೃದ್ಧಿಗೆ ಒಂದು ಅವಕಾಶ ಸಿಕ್ಕಿದಂತಾಗುತ್ತದೆ. ಈ ಪಂಚಾಯತ್ ಬಗ್ಗೆ ನಮಗೆ ಯಾವತ್ತೂ ಪ್ರೀತಿ ಇದೆ’ ಎಂದು ಉಪೇಂದ್ರ ನಾಯಕ್ ತಿಳಿಸಿದರು.
ಯಡ್ತಾಡಿಯಲ್ಲಿ ದಂಪತಿ ಆಯ್ಕೆ
ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮ ಪಂಚಾಯತ್ಗೆ ದಂಪತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಯಡ್ತಾಡಿ 2 ಕ್ಷೇತ್ರದಲ್ಲಿ ಅನುಸೂಚಿತ ಪಂಗಡದಲ್ಲಿ ಸ್ಪರ್ಧಿಸಿದ್ದ ಲೋಕೇಶ್ ನಾಯಕ್ 234 ಮತಗಳನ್ನು ಪಡೆದು ಮತ್ತು ಯಡ್ತಾಡಿ 1 ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಮೀಸಲಾತಿಯಿಂದ ಅವರ ಪತ್ನಿ ಸವಿತಾ 567 ಪಡೆದು ಗೆಲವು ಸಾಧಿಸಿದ್ದಾರೆ.
ಟಾಸ್ ಮೂಲಕ ಅಭ್ಯರ್ಥಿ ಆಯ್ಕೆ
ಬ್ರಹ್ಮಾವರ ತಾಲೂಕಿನ ಹಾವಂಜೆಯ ಗ್ರಾಪಂನಲ್ಲಿ ಟೈ ಫಲಿತಾಂಶ ಬಂದಿದ್ದು, ಇಲ್ಲಿ ಕೂಡ ಟಾಸ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಲಾಯಿತು.
ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಿದ್ದ ಉದಯ ಕುಮಾರ್ ಮತ್ತು ಹರೀಶ್ ಶೆಟ್ಟಿ ಕೀಳಂಜೆ 330 ಸಮಾನ ಮತ ಪಡೆದಿದ್ದು, ಬಳಿಕ ಅಧಿಕಾರಿಗಳು ತೆಗೆದು ಕೊಂಡ ನಿರ್ಧಾರದಂತೆ ಟಾಸ್ ಮಾಡಲಾಯಿತು. ಅದರಲ್ಲಿ ಉದಯ ಕುಮಾರ್ ವಿಜಯಿ ಆಗುವ ಮೂಲಕ ಸದಸ್ಯರಾಗಿ ಆಯ್ಕೆಯಾದರು.