ಬೆಳ್ತಂಗಡಿ :ಪಾಕ್ ಪರ ಘೋಷಣೆ ಆರೋಪ; ಮೂವರು ಪೊಲೀಸ್ ವಶಕ್ಕೆ
ಠಾಣೆಯ ಎದುರು ಜಮಾಯಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು
![ಬೆಳ್ತಂಗಡಿ :ಪಾಕ್ ಪರ ಘೋಷಣೆ ಆರೋಪ; ಮೂವರು ಪೊಲೀಸ್ ವಶಕ್ಕೆ ಬೆಳ್ತಂಗಡಿ :ಪಾಕ್ ಪರ ಘೋಷಣೆ ಆರೋಪ; ಮೂವರು ಪೊಲೀಸ್ ವಶಕ್ಕೆ](https://www.varthabharati.in/sites/default/files/images/articles/2020/12/31/273300-1609438841.jpg)
ಬೆಳ್ತಂಗಡಿ : ಎಸ್ ಡಿಪಿಐ ಕಾರ್ಯಕರ್ತರು ಬುಧವಾರ ಮಧ್ಯಾಹ್ನ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುವೆಟ್ಟು ಗ್ರಾಮ ನಿವಾಸಿಗಳಾದ ಮುಹಮ್ಮದ್ ಹರ್ಷದ್ (22), ದಾವೂದ್ (36) ಹಾಗೂ ಇಸಾಕ್ (28) ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮಾಯಕ ಯುವಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿ ಎಸ್ ಡಿ ಪಿಐ ಕಾರ್ಯಕರ್ತರು ಹಾಗೂ ಪೊಲೀಸರ ವಶದಲ್ಲಿರುವ ಯುವಕರ ಮನೆಯವರು ಹಾಗೂ ಮಹಿಳೆಯರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ತಮಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.
ಪೊಲೀಸ್ ಅಧಿಕಾರಿಗಳು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕಿರುವ ವೀಡಿಯೋಗಳನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಸದರಿ ವೀಡಿಯೋವನ್ನು ಹೊರತುಪಡಿಸಿ ಈ ಘಟನೆಗೆ ಸಂಬಂಧಿಸಿದ ಮೊಬೈಲ್ ಮೂಲಕ ಚಿತ್ರೀಕರಿಸಲಾದ ಇತರ ಎರಡು ವೀಡಿಯೊಗಳೂ ಪೊಲೀಸರಿಗೆ ಲಭ್ಯವಾಗಿದ್ದು ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಪ್ರಕರಣದ ಬಗ್ಗೆ ನಡೆಸಲಾಗಿರುವ ತನಿಖೆಯ ಆಧಾರದಲ್ಲಿ ಹಾಗೂ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಅಧಾರದಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.