ಉಡುಪಿ: ಜಿಲ್ಲಾ ಯುವ ಸಂಸತ್ತು ಭಾಷಣ ಸ್ಪರ್ಧೆಯ ವಿಜೇತರು

ಉಡುಪಿ, ಡಿ.31: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಯುವ ಸಂಸತ್ತು ವಿಭಾಗೀಯ ಮಟ್ಟದ ಭಾಷಣ ಸ್ಪರ್ಧೆಯು ಮಂಗಳವಾರ ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ನಡೆಯಿತು.
ಉಡುಪಿ ಜಿಲ್ಲೆಯು ಈ ಸ್ಪರ್ಧೆಗೆ ನೊಡೆಲ್ ಕೇಂದ್ರವಾಗಿದ್ದು, ಇದರ ಆಶ್ರಯದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಯ 18ರಿಂದ 25 ವರ್ಷದೊಳಗಿನ 38 ಯುವ ಜನರು ಆನ್ಲೈನ್ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲೆಯಿಂದ ಶ್ರೇಯಸ್ ಜಿ. ಕೋಟ್ಯಾನ್ ಹಾಗೂ ಶೆರ್ಲಿನ್ ಡಿ ಆಲ್ಮೇಡಾ ವಿಜೇತರಾಗಿದ್ದು, ಜನವರಿ 5ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಆನ್ಲೈನ್ ಭಾಷಣ ಸ್ಫರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವಿಜಯ್, ಕುಂದಾಪುರ ಭಂಡಾರ್ಕಾರ್ಸ್ ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಶೆಟ್ಟಿ, ಕೋಟೇಶ್ವರ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್, ಮೂಡುಬೆಳ್ಳೆ ಸೆಂಟ್ ಲಾರೆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಎಡ್ವರ್ಡ್ ಎಲ್ ಡಿ ಸೋಜಾ ಹಾಗೂ ತೆಂಕನಿಡಿಯೂರು ಸರಕಾರಿ ಪದ ಪೂರ್ವ ಕಾಲೇಜಿನ ಪ್ರೊ. ದಯಾನಂದ ಕುಮಾರ್ ಭಾಗವಹಿಸಿದ್ದರು.
ವಿಭಾಗೀಯ ಮಟ್ಟದ ಆನ್ಲೈನ್ ಸ್ಪರ್ಧೆಯನ್ನು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿ ಸೋಜಾ ನಿರ್ವಹಿಸಿದರು.







