ಖುಲಾಯಿಸಿದ ಅದೃಷ್ಟ: ಬಿಇಡಿ ವಿದ್ಯಾರ್ಥಿನಿ ಈಗ ಗ್ರಾ.ಪಂ. ಸದಸ್ಯೆ

ಹನೂರು,ಡಿ.31: ವಿವಿಧ ಪಕ್ಷಗಳ ಕಾರ್ಯಕರ್ತರ ಜಿದ್ದಾಜಿದ್ದಿ, ಮುಖಂಡರ ಪ್ರತಿಷ್ಟೆ ನಡುವೆ ಬಿಇಡಿ ವಿದ್ಯಾರ್ಥಿನಿ ಒಬ್ಬರು ಗ್ರಾಪಂ ಸದಸ್ಯೆಯಾಗಿರುವ ಘಟನೆ ಹನೂರು ತಾಲೂಕಿನ ಎಲ್ಲೆಮಾಳ ಗ್ರಾಪಂನ ಬೋಡಮುತ್ತನೂರು ಗ್ರಾಮದಲ್ಲಿ ನಡೆದಿದೆ.
ಕೊಳ್ಳೇಗಾಲದ ನಿಸರ್ಗ ಕಾಲೇಜೆನಲ್ಲಿ ಬಿಇಡಿ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಪ್ರಿಯದರ್ಶಿನಿ ಗ್ರಾಪಂ ಸದಸ್ಯೆಯಾದ ವಿದ್ಯಾರ್ಥಿನಿ. 5 ನೇ ಬ್ಲಾಕಿನ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರಿಗೆ ಲಾಟರಿ ಮೂಲಕ ಅದೃಷ್ಟ ಖುಲಾಯಿಸಿ ವಿಜಯಮಾಲೆ ಧರಿಸಿದ್ದಾರೆ.
ಪ್ರಿಯದರ್ಶಿನಿ ಸಿ. ಹಾಗೂ ಪ್ರತಿಸ್ಪರ್ಧಿ ಮಂಜುಳಾ ಎಸ್. ಇಬ್ಬರೂ ಸಹ 287 ಸಮ ಮತಗಳು ಪಡೆದ ಹಿನ್ನಲೆಯಲ್ಲಿ ಲಾಟರಿ ಎತ್ತುವ ಮೂಲಕ ಪ್ರಿಯದರ್ಶಿನಿ ಗೆಲುವಿನ ನಗೆ ಬೀರಿದ್ದಾರೆ. ಈ ಕುರಿತು ಪ್ರಿಯದರ್ಶಿನಿ ಮಾತನಾಡಿ, ಗ್ರಾಪಂನಲ್ಲಿರುವ ಅವ್ಯವಸ್ಥೆ ಸರಿಪಡಿಸಿ ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿ ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ. ಕೆಲಸ ಮಾಡುವ ಮೂಲಕ ಅವರ ಋಣ ತೀರಿಸುತ್ತೇನೆಂದು ತಿಳಿಸಿದರು.







