ಉಡುಪಿಯಲ್ಲಿ ಮೃತಪಟ್ಟ ಶೇ.50ರಷ್ಟು ಕೊರೋನ ಸೋಂಕಿತರಲ್ಲಿ ಲಿವರ್ ಸಮಸ್ಯೆ: ಡಾ.ಶಶಿಕಿರಣ್
![ಉಡುಪಿಯಲ್ಲಿ ಮೃತಪಟ್ಟ ಶೇ.50ರಷ್ಟು ಕೊರೋನ ಸೋಂಕಿತರಲ್ಲಿ ಲಿವರ್ ಸಮಸ್ಯೆ: ಡಾ.ಶಶಿಕಿರಣ್ ಉಡುಪಿಯಲ್ಲಿ ಮೃತಪಟ್ಟ ಶೇ.50ರಷ್ಟು ಕೊರೋನ ಸೋಂಕಿತರಲ್ಲಿ ಲಿವರ್ ಸಮಸ್ಯೆ: ಡಾ.ಶಶಿಕಿರಣ್](https://www.varthabharati.in/sites/default/files/images/articles/2021/01/1/273445-1609512787.jpg)
ಉಡುಪಿ, ಜ.1: ಮದ್ಯ ಸೇವನೆ ಮಾಡುವವರಿಗೆ ಕೋವಿಡ್ ರೋಗ ಬಂದರೆ ಹೆಚ್ಚು ತೊಂದರೆ ಎದುರಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ಕೋರೋನದಿಂದ ಮೃತಪಟ್ಟವರಲ್ಲಿ ಶೇ.50ರಷ್ಟು ಮಂದಿ ಲಿವರ್ ತೊಂದರೆ ಇದ್ದವರಾಗಿದ್ದರೆ, ಶೇ.30ರಷ್ಟು ಕಿಡ್ನಿ, ಶೇ.8-10 ಹೃದಯ ಮತ್ತು ಇತರ ತೊಂದರೆಯಿಂದ ಬಳಲುತ್ತಿರುವವರಾಗಿದ್ದಾರೆ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.
ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ.ಬಾಳಿಗಾ ಚಾರೀಟೇಬಲ್ ಟ್ರಸ್ಟ್ ಮುಂಬಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ 28ನೇ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮದ್ಯವು ಮನುಷ್ಯನ ಮೆದುಳಿನಿಂದ ಹಿಡಿದು ಚರ್ಮದ ವರೆಗೆ ಎಲ್ಲ ಅಂಗಗಳಿಗೂ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಆದುದರಿಂದ ಮದ್ಯ ಸೇವನೆ ದೇಹಕ್ಕೆ ಲಾಭವಾಗುತ್ತದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು. ಮದ್ಯದಿಂದ ಮನುಷ್ಯನ ದೇಹಕ್ಕೆ ಯಾವುದೇ ರೀತಿಯ ಒಳ್ಳೆಯ ಪ್ರಯೋಜನ ಆಗುವುದಿಲ್ಲ. ಇದು ತಪ್ಪು ಮಾಹಿತಿಯೇ ಹೊರತು ಸತ್ಯ ಅಲ್ಲ ಎಂದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಕಳೆದ ಐದು ವರ್ಷ ಗಳಿಂದ ಮದ್ಯವ್ಯಸನದಿಂದ ಮುಕ್ತರಾದ ಮ್ಯಾಕ್ಸ್ ಡಿಮೆಲೊ ಕಾರ್ಕಳ, ಶ್ರೀಧರ ಅಲೆವೂರು, ಮಣಿ ಜಿ. ಚಿಕ್ಕಮಗಳೂರು, ಶಿವರಾಮ ಕೋಟ, ಸುರೇಶ್ ನಾಯಕ್ ಶಂಕರ್ನಾರಾಯಣ ಮತ್ತು ಕೋವಿಡ್ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾ ವಿದ್ಯಾಲಯ ಮಾನಸಿಕ ಆರೋಗ್ಯ ವಿಭಾಗ ಮುಖ್ಯಸ್ಥ ಹಾಗೂ ಮನೋವೈದ್ಯ ಡಾ.ಶ್ರೀನಿವಾಸ್ ಭಟ್, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು ಭಾಗವಹಿಸಿದ್ದರು.
ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಸ್ವಾಗತಿಸಿದರು. ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಮನೋ ವೈದ್ಯ ಡಾ.ದೀಪಕ್ ಮಲ್ಯ ವಂದಿಸಿದರು. ಆಪ್ತ ಸಮಾಲೋಚಕರಾದ ಪಾವನ ಮತ್ತು ಗಿರೀಶ್ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು.