ಅನಿವಾಸಿ ಕನ್ನಡಿ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ನೀಡಿ: ಕರವೇ ರಾಜ್ಯಾಧ್ಯ ಟಿ.ಎ.ನಾರಾಯಣ ಗೌಡ

ಬೆಂಗಳೂರು, ಜ.1: ರಾಜ್ಯ ಸರಕಾರ ಪರಭಾಷಾ ಉದ್ಯಮಿಗಳನ್ನು ಓಲೈಸುವುದನ್ನು ಬಿಟ್ಟು ರಾಜ್ಯದಲ್ಲಿ ಬಂಡವಾಳ ಹೂಡಲು ಅನಿವಾಸಿ ಕನ್ನಡಿಗ ಉದ್ಯಮಿಗಳಿಗೆ ಹೆಚ್ಚು ಅವಕಾಶ, ರಿಯಾಯಿತಿ ಹಾಗೂ ಸೌಲಭ್ಯಗಳನ್ನು ಒದಗಿಸಬೇಕೆಂದು ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹೊರದೇಶಗಳಲ್ಲಿರುವ ಕನ್ನಡಿಗರು ಭೌತಿಕವಾಗಿ ನಮ್ಮಿಂದ ದೂರವಿರಬಹುದು. ಆದರೆ, ಅವರೆಲ್ಲ ಕರ್ನಾಟಕದ ಮಣ್ಣಿನ ಮಕ್ಕಳು. ದೂರದೇಶಗಳಲ್ಲಿ ಇದ್ದರೂ ನಾಡಿನ ಅಭಿವೃದ್ಧಿಗಾಗಿ ಉತ್ಸುಕರಾಗಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯ ಸರಕಾರ ನಿರ್ಲಕ್ಷ್ಯ ಮಾಡಕೂಡದೆಂದು ತಿಳಿಸಿದ್ದಾರೆ.
ಹೊರದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಕನ್ನಡಿಗರು ಸಮಸ್ಯೆಗಳಿಗೆ ಸಿಲುಕಿಕೊಂಡಾಗ ರಾಜ್ಯ ಸರಕಾರ ಕೂಡಲೇ ನೆರವಿಗೆ ಬರಬೇಕು. ಪ್ರತಿಯೊಬ್ಬ ಕನ್ನಡಿಗರ ಜೀವ, ಮಾನ ಅತ್ಯಂತ ಮುಖ್ಯವಾದದ್ದು. ಅದನ್ನು ಕಾಪಾಡುವ ಹೊಣೆ ರಾಜ್ಯ ಸರಕಾರದಾಗಿದೆ. ಒಬ್ಬನೇ ಒಬ್ಬ ಕನ್ನಡಿಗ ಕಾರ್ಮಿಕನಿಗೂ ಹೊರದೇಶಗಳಲ್ಲಿ ಯಾವುದೇ ರೀತಿಯ ಅನ್ಯಾಯವಾಗಬಾರದೆಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ಮೂರು ವರ್ಷಗಳಿಂದ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಿಲ್ಲ. ಕೂಡಲೇ ಉಪಾಧ್ಯಕ್ಷರನ್ನು ನೇಮಿಸುವ ಜತೆಗೆ, ಕನ್ನಡ ಕಾಳಜಿಯ ಕ್ರಿಯಾಶೀಲ ಅಧಿಕಾರಿಗೆ ಸಮಿತಿಯ ಜವಾಬ್ದಾರಿ ನೀಡಬೇಕು. ಅನಿವಾಸಿ ಕನ್ನಡಿಗರು ಮತ್ತು ಸರಕಾರದ ನಡುವೆ ಇರುವ ಏಕೈಕ ಕೊಂಡಿ ಈ ಸಮಿತಿ ಎಂಬುದನ್ನು ಸರಕಾರ ಮರೆಯಬಾರದು.
-ಟಿ.ಎ.ನಾರಾಯಣ ಗೌಡ, ರಾಜ್ಯಾಧ್ಯಕ್ಷ, ಕನ್ನಡ ರಕ್ಷಣಾ ವೇದಿಕೆ







