ಕಳವು ಪ್ರಕರಣ: ಯುವಕ ಬಂಧನ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು, ಜ.2: ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದಡಿ ಯುವಕನೋರ್ವನನ್ನು ಇಲ್ಲಿನ ಬಾಗಲಗುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿಯ ವಿರಾಜಪೇಟೆಯ ಮೂಲದ ಸುಮನ್ ಬಂಧಿತ ಆರೋಪಿಯಾಗಿದ್ದು, ಈತನಿಂದ 10 ಲಕ್ಷ ಮೌಲ್ಯದ 216 ಗ್ರಾಂ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದ ಸುಮನ್, ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡುತ್ತಿದ್ದ. ಜಸ್ಟ್ ಡಯಲ್ ಮೂಲಕ ವಾಷಿಂಗ್ ಮಷಿನ್ ರಿಪೇರಿ ಸಂಬಂಧ ಮಾಹಿತಿ ಪಡೆದು, ಗ್ರಾಹಕರ ಮನೆಗಳಿಗೆ ಹೋಗುತ್ತಿದ್ದ. ತದನಂತರ, ಅವರು ಮನೆಯಲ್ಲಿ ಇಲ್ಲದ ಮಾಹಿತಿ ಸಂಗ್ರಹಿಸಿ ಕಳವು ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





