ಭಟ್ಕಳ: ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ
![ಭಟ್ಕಳ: ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ ಭಟ್ಕಳ: ಮಹಿಳೆಯರಿಂದ ಯಶಸ್ವಿ ರಕ್ತದಾನ ಶಿಬಿರ](https://www.varthabharati.in/sites/default/files/images/articles/2021/01/2/273639-1609608281.jpg)
ಭಟ್ಕಳ : ತಾಲೂಕಾಸ್ಪತ್ರೆಯು ಉಡುಪಿಯ ಬ್ಲಡ್ ಬ್ಯಾಂಕ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ, ಜಿಐಒ, ವುಮೆನ್ಸ್ ಕ್ಲಬ್ ಮತ್ತು ಆಶಾ ಕಾರ್ಯಕರ್ತರ ಸಹಯೋಗದೊಂದಿಗೆ ಶನಿವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ವುಮೆನ್ಸ್ ಸೆಂಟರ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಮಹಿಳೆಯರಿಗಾಗಿಯೇ ನಡೆದ ಈ ರಕ್ತದಾನ ಶಿಬಿರದಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಒಟ್ಟು 75 ಮಹಿಳೆಯರು ತಮ್ಮ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಅಮೂಲ್ಯ ಜೀವ ಉಳಿಸುವಲ್ಲಿ ತಮ್ಮ ಕೊಡುಗೆಯನ್ನು ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ್ ಮಹಿಳೆಯರಿಂದಲೇ ಆಯೋಜಿಸಲ್ಪಟ್ಟಿರುವ ಇಂದಿನ ರಕ್ತದಾನ ಶಿಬಿರ ಒಂದು ವಿಶೇಷವಾದ ಕಾರ್ಯಕ್ರಮವಾಗಿದ್ದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರೆಯವಂತೆ ರಕ್ತದಾನ ಮಾಡುವುದರಲ್ಲೂ ಮುಂದಾಗಿರುವುದು ಸಂತಸ ತಂದಿದೆ ಎಂದರು.
ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ಭಟ್ಕಳದ ಕುರಿತಂತೆ ಯಾವಾಗಲೂ ನಕರಾತ್ಮಕವಾಗಿ ಯೋಚಿಸು ವಂತವರಿಗೆ ಇಲ್ಲಿನ ಜನರ ಸಾಮಾಜಿಕ ಮತ್ತು ಮಾನವೀಯ ಕಳಕಳಿ ಅರ್ಥವಾಗದು. ಇಲ್ಲಿನ ಮಹಿಳೆಯರೂ ಕೂಡ ಸಮಾಜಸೇವೆಯಲ್ಲಿ ಮುಂದಿದ್ದಾರೆ ಎನ್ನುವುದಕ್ಕೆ ಇಂದಿನ ಈ ಮಹಿಳಾ ರಕ್ತದಾನ ಶಿಬಿರದ ಯಶಸ್ವಿಯೆ ಸಾಕ್ಷಿಯಾಗಿದೆ, ಹಿಂದೂ-ಮುಸ್ಲಿಮ ಮತ್ತು ಎಲ್ಲ ಸಮುದಾ ಯದ ಮಹಿಳೆಯರು ಸೇರಿ ಮಾಡಿದಂತಹ ಈ ಕಾರ್ಯ ಇಲ್ಲಿನ ಹಿಂದೂ ಮುಸ್ಲಿಮರ ಸೌಹಾರ್ದತೆ, ಮತ್ತು ಮಾನವೀಯ ಮೌಲ್ಯಗಳಿಗೆ ಕನ್ನಡಿ ಹಿಡಿದಂತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಶಮ್ಸ್ ನೂರ್, ವುಮೆನ್ಸೆ ಸೆಂಟರ್ ನ ಡಾ. ಫಾತಿಮಾ ತನೀಮ್ ಮತ್ತಿತರರು ಉಪಸ್ಥಿತರಿದ್ದರು.