ಐತಿಹಾಸಿಕ ಸಂತೆಕಟ್ಟೆ ಹೊಸ ಮಾರುಕಟ್ಟೆಗೆ ಸ್ಥಳಾಂತರ: 150ಕ್ಕೂ ಅಧಿಕ ವ್ಯಾಪಾರಸ್ಥರು ಭಾಗಿ
ರಾ.ಹೆದ್ದಾರಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ
![ಐತಿಹಾಸಿಕ ಸಂತೆಕಟ್ಟೆ ಹೊಸ ಮಾರುಕಟ್ಟೆಗೆ ಸ್ಥಳಾಂತರ: 150ಕ್ಕೂ ಅಧಿಕ ವ್ಯಾಪಾರಸ್ಥರು ಭಾಗಿ ಐತಿಹಾಸಿಕ ಸಂತೆಕಟ್ಟೆ ಹೊಸ ಮಾರುಕಟ್ಟೆಗೆ ಸ್ಥಳಾಂತರ: 150ಕ್ಕೂ ಅಧಿಕ ವ್ಯಾಪಾರಸ್ಥರು ಭಾಗಿ](https://www.varthabharati.in/sites/default/files/images/articles/2021/01/3/273695-1609683259.jpg)
ಉಡುಪಿ, ಜ. 3: ಪ್ರತಿ ರವಿವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ತಡೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದ್ದ ನೂರಾರು ವರ್ಷ ಗಳ ಇತಿಹಾಸ ಇರುವ ಜಿಲ್ಲೆಯ ಪ್ರಮುಖ ಸಂತೆಯಾಗಿರುವ ಸಂತೆಕಟ್ಟೆಯ ವಾರದ ಸಂತೆಯು ಸ್ಥಳಾಂತರಗೊಂಡಿದ್ದು, ಗೋಪಾಲಪುರ ವಾರ್ಡಿನ ಕಲ್ಯಾಣಪುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಂತೆ ಮಾರುಕಟ್ಟೆಯಲ್ಲಿ ಇಂದು ಸಂತೆ ನಡೆಯಿತು.
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 17,500 ಚದರ ಅಡಿ ವಿಸ್ತ್ರೀರ್ಣದ ಹೊಸ ಮಾರುಕಟ್ಟೆಯಲ್ಲಿ ಸುಮಾರು 150ಕ್ಕೂ ಅಧಿಕ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಹಾಗೂ ವ್ಯಾಪಾರಿಗಳು ತಾಜಾ ತರಕಾರಿ ಹಾಗೂ ಇತರ ಉತ್ಪನ್ನಗಳೊಂದಿಗೆ ವ್ಯಾಪಾರ ನಡೆಸಿ ದರು. ಹಸಿ ಹಾಗೂ ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಹಳೆಯ ಮಾರುಕ ಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಬೆಳಗಿನ ಜಾವ ಐದು ಗಂಟೆಯಿಂದ ಆರಂಭಗೊಂಡ ಸಂತೆಯು ಮಧ್ಯಾಹ್ನ ದವರೆಗೂ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆಯುತ್ತಿದ್ದ ಈ ಸಂತೆ ಈ ಹಿಂದೆ ಬೆಳಗ್ಗೆ 9ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು. ಆದರೆ ಈ ಹೊಸ ಮಾರುಕಟ್ಟೆಯಲ್ಲಿ ಮಧ್ಯಾಹ್ನದವರೆಗೂ ಗ್ರಾಹಕರು ವಸ್ತುಗಳ ಖರೀದಿಗೆ ಆ ಮಿಸುತ್ತಿರುವುದು ಕಂಡುಬಂತು.
ಸರಕಾರೇತರ ಸಂಸ್ಥೆ ಸಾಹಸ್ ಮತ್ತು ನಗರಸಭೆ ಜಂಟಿಯಾಗಿ ವ್ಯಾಪಾರಸ್ಥರಿಗೆ ಕರಪತ್ರ ಮತ್ತು ಕೈಚೀಲ ವಿತರಿಸುವ ಮೂಲಕ ಪರಿಸರ ಸ್ನೇಹಿ ಜನಜಾಗೃತಿ, ತ್ಯಾಜ್ಯ ವಿಲೇವಾರಿ ಮತ್ತು ವಿಂಗಡನೆ ಬಗ್ಗೆಯೂ ಮಾಹಿತಿ ನೀಡುವ ಕಾರ್ಯ ಮಾಡಿದರು.
ಟ್ರಾಫಿಕ್ ಸಮಸ್ಯೆಗೆ ಬ್ರೇಕ್: ಈ ಹಿಂದೆ ರವಿವಾರ ಬಂದರೆ ಸಂತೆಕಟ್ಟೆ ಇಡೀ ರಾಷ್ಟ್ರೀಯ ಹೆದ್ದಾರಿಯು ಸಂತೆ ಮಾರುಕಟ್ಟೆಯಾಗಿ ಪರಿವರ್ತನೆ ಯಾಗು ತ್ತಿತ್ತು. ತರಕಾರಿ ಮಾರಾಟ ಮಾಡುವವರು ಮತ್ತು ಕೊಳ್ಳುವವರು ಹಾಗೂ ಅವರ ವಾಹನಗಳು ಇಡೀ ರಾಷ್ಟ್ರೀಯ ಹೆದ್ದಾರಿಯನ್ನೇ ಆಕ್ರಮಿಸಿಕೊಳ್ಳುತ್ತಿತ್ತು. ಇದರಿಂದ ಪ್ರತಿ ರವಿವಾರ ಇಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಮತ್ತು ಅಪಘಾತ ಗಳು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸುತ್ತಿತ್ತು.
ಅಲ್ಲದೆ ಸ್ಥಳಾವಕಾಶದ ಕೊರತೆಯಿಂದ ಸುಮಾರು ಅರ್ಧ ಕಿ.ಮೀ. ಉದ್ದದವ ರೆಗಿನ ರಾ.ಹೆ. ಸರ್ವಿಸ್ ರಸ್ತೆಯು ಮಾರುಕಟ್ಟೆಯಾಗಿ ವಿಸ್ತಾರಗೊ ಳುತ್ತಿತ್ತು. ಹೀಗೆ ಸಂತೆಕಟ್ಟೆಯ ಸಂತೆಯು ಹಲವು ದಶಕಗಳ ಸಮಸ್ಯೆಯಾಗಿ ಕಾಡುತ್ತಿತ್ತು. ಇದೀಗ ಸಂತೆಯು ಹೊಸ ಮಾರುಕಟ್ಟೆಗೆ ಸ್ಥಳಾಂತರ ಗೊಂಡಿರುವುದರಿಂದ ಸಂತೆಕಟ್ಟೆಯ ರವಿವಾರದ ಬಹಳ ದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ಜಾಮ್ ಕಿರಿಕಿರಿಗೆ ಮುಕ್ತಿ ದೊರೆತಂತಾಗಿದೆ.
ಆದರೆ ಕಲ್ಯಾಣಪುರಕ್ಕೆ ಸಂತೆ ಸ್ಥಳಾಂತರಗೊಂಡಿರುವುದರಿಂದ ಸಂತೆಕಟ್ಟೆ- ಮಿಲಾಗ್ರಿಸ್ ಒಳರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ಬೆಳಗ್ಗೆ 11ಗಂಟೆಯವರೆಗೆ ಟ್ರಾಫಿಕ್ ಜಾಮ್ ಕಿರಿಕಿರಿ ಉಂಟಾಯಿತು. ಇದರಿಂದ ಸಂತೆಕಟ್ಟೆಯಿಂದ ನೇಜಾರು, ಕೆಮ್ಮಣ್ಣು, ಹೂಡೆಗೆ ಹೋಗುವ ವಾಹನಗಳಿಗೆ ತೊಂದರೆ ಎದುರಾಯಿತು.
ನಗರಸಭೆಗೆ 12.50ಲಕ್ಷ ರೂ. ಆದಾಯ
ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಂದ ಪ್ರತಿವಾರ ತಲಾ 100ರೂ. ಸುಂಕ ಪಡೆಯಲಾಗುತ್ತದೆ. ಇದರಿಂದ ಉಡುಪಿ ನಗರಸಭೆಗೆ ಪ್ರತಿವರ್ಷ ಸುಮಾರು 12.50ಲಕ್ಷ ರೂ. ವರೆಗೆ ಆದಾಯ ದೊರೆಯಲಿದೆ. ಈ ಹಿಂದೆ ವಾರ್ಷಿಕ 6.50ಲಕ್ಷ ರೂ. ಸುಂಕ ಸಂಗ್ರಹ ವಾಗುತ್ತಿತ್ತು.
ಹೊಸ ಮಾರುಕಟ್ಟೆ ಕಲ್ಯಾಣಪುರ ಶ್ರೀವೀರಭದ್ರ ದೇವಸ್ಥಾನದ ಸಮೀಪವೇ ಇರುವುದರಿಂದ ಅಲ್ಲಿ ಹಸಿ ಹಾಗೂ ಒಣ ಮೀನು ಮಾರಾಟ ಮಾಡಲು ಅವಕಾಶ ನೀಡಿಲ್ಲ. ಇದರಿಂದಾಗಿ ಮಹಿಳೆಯರು ಹಳೆ ಸಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಾಗಿದೆ. ಹಳೆ ಮಾರುಕಟ್ಟೆಗೆ ಗ್ರಾಹಕರು ಬಾರದ ಕಾರಣ ಮೀನು ಮಾರಾಟಗಾರರಿಗೆ ವ್ಯಾಪಾರ ಇಲ್ಲವಾಗಿದೆ.
![](https://www.varthabharati.in/sites/default/files/images/galllery/2021/01/3/UD-J3 SANTHEKATTE1.jpg)