ಅಖಿಲೇಶ್ ಯಾದವ್ ಹೇಳಿಕೆಗೆ ಆರ್.ವಿ.ದೇಶಪಾಂಡೆ ಖಂಡನೆ
ಬೆಂಗಳೂರು, ಜ.3: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಹೇಳಿಕೆಯು ಕೋವಿಡ್ ವ್ಯಾಕ್ಸಿನ್ ತಯಾರಿಕೆಗಾಗಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೋವಿಡ್ ಮುಕ್ತ ಭಾರತಕ್ಕಾಗಿ ಹಗಲು ರಾತ್ರಿ ದುಡಿದ ಕೊರೋನ ವಾರಿಯರ್ಸ್ಗೆ ಅವಮಾನ ಮಾಡುವಂತಹುದಾಗಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ದೇಶದ ಜವಾಬ್ದಾರಿಯುತ ನಾಗರಿಕರಾಗಿ ಇದರ ಬಗ್ಗೆ ಜಾಗೃತಿ ಹಾಗೂ ಆತ್ಮವಿಶ್ವಾಸ ಮೂಡಿಸುವ ಕೆಲಸ ನಮ್ಮದಾಗಬೇಕಾಗಿದೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಇದರ ಬಗ್ಗೆ ತಪ್ಪು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ಅಖಿಲೇಶ್ ಯಾದವ್ ರವರ ಹೇಳಿಕೆಯು ಬಾಲಿಶತನದಿಂದ ಕೂಡಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಕೋವಿಶೀಲ್ಡ್ ಹಾಗೂ ದೇಶಿಯವಾಗಿ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಯು ದೇಶದ ಆರ್ಥಿಕ ಸ್ಥಿತಿಯನ್ನೆ ಅಲುಗಾಡಿಸಿದ ಮಹಾಮಾರಿ ಕೋವಿಡ್-19 ವಿರುದ್ಧ ಹೋರಾಡಲು ಆಶಾಕಿರಣವಾಗಿ ಗೋಚರಿಸಿದೆ. ಇದು ವಿಜ್ಞಾನಿಗಳ ಸತತ ಪರಿಶ್ರಮದ ಫಲವಾಗಿ ಮಾನವೀಯತೆಯ ಗೆಲುವಾಗಿದೆ ಎಂದು ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.