ಬ್ರಾಹ್ಮಣರಿಗೂ 'ಶಾದಿ ಭಾಗ್ಯ' ಮಾದರಿಯ ಯೋಜನೆ: ಬುಧವಾರ ಸಿಎಂ ಯಡಿಯೂರಪ್ಪರಿಂದ ಚಾಲನೆ

ಬೆಂಗಳೂರು, ಜ.4: ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 'ಶಾದಿಭಾಗ್ಯ' ಯೋಜನೆ ಮಾದರಿಯಲ್ಲಿಯೇ ಇದೀಗ ಬಿಜೆಪಿ ಸರಕಾರ, ಬ್ರಾಹ್ಮಣ ಸಮುದಾಯದ ಬಡ ಹೆಣ್ಣುಮಕ್ಕಳಿಗೆ ಧನ ಸಹಾಯ ಮಾಡುವ ಯೋಜನೆಯೊಂದನ್ನು ತಂದಿದ್ದು, ಬುಧವಾರ(ಜ.6) ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ರಾಜ್ಯ ಬ್ರಾಹ್ಮಣ ಅಭಿವದ್ಧಿ ಮಂಡಳಿ ವತಿಯಿಂದ “ಅರುಂಧತಿ” ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ಬ್ರಾಹ್ಮಣ ಬಡ ಹೆಣ್ಣುಮಕ್ಕಳ ಮದುವೆಗಾಗಿ ಅರ್ಜಿಗಳ ಸಂಖ್ಯೆಯ ಅನುಗುಣವಾಗಿ ತಲಾ 25 ಸಾವಿರ ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.
ಏನಿದು ಯೋಜನೆ?: ಮುಸಿಮ್, ಕ್ರೈಸ್ತ, ಜೈನ್, ಸಿಖ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಯುವತಿಯರ ಮದುವೆಗೆ 50 ಸಾವಿರ ರೂ. ನೀಡುವ ಯೋಜನೆ ‘ಶಾದಿಭಾಗ್ಯ’ ಅನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೊಳಿಸಲಾಗಿತ್ತು. ಆದರೆ, ಕಳೆದ ವಾರ್ಷಿಕ ಸಾಲಿನ ಮಾರ್ಚ್ ನಲ್ಲಿಯೇ ಈ ಯೋಜನೆಯನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರದ್ದುಪಡಿಸಿತ್ತು.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅಲ್ಪಸಂಖ್ಯಾತರ ನಿರ್ದೇಶನಾಲಯ, ‘ಈ ವರ್ಷದ ಬಜೆಟ್ನಲ್ಲಿ ಅನುದಾನ ನಿಗದಿಪಡಿಸದಿರುವುದರಿಂದ ಶಾದಿಭಾಗ್ಯ (ಬಿದಾಯಿ) ಕ್ಕಾಗಿ ಹೊಸ ಅರ್ಜಿ ಸ್ವೀಕರಿಸುವುದನ್ನು ತಕ್ಷಣವೇ ನಿಲ್ಲಿಸಿ' ಎಂದು ಅಲ್ಪಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿತ್ತು.
ಆದರೆ, ಇದೀಗ ಬ್ರಾಹ್ಮಣ ಸಮುದಾಯದ ಬಡ ಹೆಣ್ಣುಮಕ್ಕಳ ಮದುವೆಗಾಗಿ ‘ಶಾದಿಭಾಗ್ಯ’ ಮಾದರಿಯಲ್ಲಿ 'ಅರುಂಧತಿ' ಯೋಜನೆ ಜಾರಿಗೆ ತಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ ಎನ್ನುವ ಮಾತುಗಳು ಕೇಳಿಬಂದಿವೆ.
6 ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ
ರಾಜ್ಯ ಬ್ರಾಹ್ಮಣ ಅಭಿವದ್ಧಿ ಮಂಡಳಿವತಿಯಿಂದ ಬ್ರಾಹ್ಮಣ ಸಮುದಾಯದ ಸರ್ವಾಂಗಿಣ ಅಭಿವೃದ್ಧಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಸಾಂದೀಪನಿ ಶಿಷ್ಯ ವೇತನ ಯೋಜನೆ, ಪುರುಷೋತ್ತಮ ಯೋಜನೆ, ಅರುಂಧತಿ, ಅನ್ನದಾತ, ಮೈತ್ರೇಯಿ ಯೋಜನೆಗಳಿಗೆ ಜ.6ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.
ಅರ್ಚಕ, ಪುರೋಹಿತರನ್ನು ವಿವಾಹವಾದರೆ 3 ಲಕ್ಷ..!
* ಅರ್ಚಕ, ಪುರೋಹಿತರನ್ನು ಮದುವೆಯಾಗುವವರಿಗೆ ಮೈತ್ರೇಯಿ ಯೋಜನೆಯಡಿ 3 ಲಕ್ಷ ರೂ. ಬಾಂಡ್.
* ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ, ಪಿಎಚ್ಡಿ, ಸಂಸ್ಕೃತ ಪದವಿ ಸೇರಿ ಮುಂತಾದ ತರಗತಿಯಲ್ಲಿ ವ್ಯಾಸಂಗ ಮಾಡುವ 7,500 ವಿಪ್ರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ.
* ಚಾಣಾಕ್ಯ ಆಡಳಿತ ತರಬೇತಿ ಯೋಜನೆಯಡಿ ಕೇಂದ್ರ ಲೋಕ ಸೇವಾ ಆಯೋಗ ಐಎಎಸ್ ಪರೀಕ್ಷೆ ಕೈಗೊಳ್ಳಲು ಇಚ್ಛಿಸಿದ 161 ವಿದ್ಯಾರ್ಥಿಗಳಿಗೆ ಕೇಂದ್ರದ ಸಂಕಲ್ಪ್ ಅಕಾಡೆಮಿಯಲ್ಲಿ ತರಬೇತಿ.
* 5 ಎಕರೆಗಿಂತ ಕಡಿಮೆ ಜಮೀನು ಉಳ್ಳವರಿಗೆ ಅನ್ನದಾತ ಯೋಜನೆಯಡಿ ಬೋರ್ವೆಲ್, ಟ್ರ್ಯಾಕ್ಟರ್ ಖರೀದಿ ಮತ್ತು ಹೈನುಗಾರಿಕೆಗೆ ಧನಸಹಾಯ







