ಬ್ಲಾಕ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜ.5: 2021 ಅನ್ನು ಹೋರಾಟದ ವರ್ಷ, ಪಕ್ಷ ಸಂಘಟನೆ ವರ್ಷ ಅಂತಾ ಘೋಷಣೆ ಮಾಡಿದ್ದೇವೆ. ಎಲ್ಲ ಬ್ಲಾಕ್ ಅಧ್ಯಕ್ಷರು, ಅವರ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಧ್ವನಿ ನಾಯಕರ ಧ್ವನಿಯಾಗಬೇಕು. ಈ ನಿಟ್ಟಿನಲ್ಲಿ ನಾಳೆ ಮಂಗಳೂರಿನಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಪಕ್ಷ ನಾಯಕರು, ಬ್ಲಾಕ್ ಅಧ್ಯಕ್ಷರ ಜತೆ ಸಭೆ ಕರೆದಿದ್ದೇನೆ. ಇದು ಪಕ್ಷದ ಆಂತರಿಕ ಸಭೆ, ಸಾರ್ವಜನಿಕ ಸಭೆಯಲ್ಲ ಎಂದರು.
ಇಂದು ಮಂಗಳೂರಿಗೆ ತೆರಳಲಿದ್ದು, ಜ.7 ರಂದು ವಾಪಸ್ಸಾಗುತ್ತೇನೆ. ಜ.8 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ, ನಂತರ ಹುಬ್ಬಳ್ಳಿಯಲ್ಲಿ ಬೆಳಗಾವಿ ವಿಭಾಗದ ಸಭೆ ಜ.11ರಂದು ನಿಗದಿ ಪಡಿಸಲಾಗಿದೆ. ಜ.18 ರಂದು ಗುಲ್ಬರ್ಗದಲ್ಲಿ ಸಭೆ ನಡೆಯಲಿದೆ. ನಾನು ಅಲ್ಲೆ ಇರುತ್ತೇನೆ. ಯಾರನ್ನು ಭೇಟಿ ಮಾಡಬೇಕೋ ಅವರನ್ನೆಲ್ಲ ಭೇಟಿ ಮಾಡಿ ಬರುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಇದೇ ಮಾರ್ಚ್ನಿಂದ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ರಾಜ್ಯದ ಸಮಸ್ಯೆ ಬೇರೆ, ಸ್ಥಳೀಯ ಸಮಸ್ಯೆ ಬೇರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಜನೆಗೆ ಅನುಮತಿ ನೀಡಲು ಸರಕಾರ ಮೂರರಷ್ಟು ಶುಲ್ಕ ವಿಧಿಸಿದೆ. ಅವರೆ ಲಾಕ್ ಡೌನ್, ಸೀಲ್ ಡೌನ್ ಮಾಡಿ ವ್ಯಾಪಾರಿಗಳಿಗೆ ಆದಾಯ ಇಲ್ಲದಂತೆ ಮಾಡಿದರು. ಹೀಗಾಗಿ ಅವರು ತೆರಿಗೆ ಮನ್ನಾ ಮಾಡುವ ಬದಲು ಹೆಚ್ಚು ಮಾಡುತ್ತಿದ್ದಾರೆ. ಹೀಗೆ ಸ್ಧಳೀಯವಾಗಿ ಅನೇಕ ಸಮಸ್ಯೆಗಳಿವೆ. ಸರಕಾರದ ತೀರ್ಮಾನ, ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಚುನಾವಣೆ ಗೆಲ್ಲಲು ತಂತ್ರ: ಅನುಭವ ಮಂಟಪ ಶಂಕುಸ್ಥಾಪನೆ ಚುನಾವಣೆ ತಂತ್ರ. ಬಸವ ಕಲ್ಯಾಣ ಉಪಚುನಾವಣೆ ಗೆಲ್ಲಲು ಈ ರೀತಿ ಮಾಡಿದ್ದಾರೆ. ಆದರೆ ಈ ಯೋಜನೆ ತೀರ್ಮಾನ ಮಾಡಿದ್ದು ನಮ್ಮ ಪಕ್ಷ. ಅವರು ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಮಾಡಿಕೊಳ್ಳಲಿ. ಅವರಿಗಿರುವ ಹಕ್ಕನ್ನು ನಾನು ಪ್ರಶ್ನಿಸುವುದಿಲ್ಲ ಎಂದ ಅವರು, ಬಿಜೆಪಿಯಲ್ಲಿನ ಅಸಮಾಧಾನದ ಬಗ್ಗೆ ಮಾಧ್ಯಮದವರಿಗೆ ಗೊತ್ತಿರುವಾಗ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯುವ ಕಾಂಗ್ರೆಸ್ ಚುನಾವಣೆ: ಪಕ್ಷದಲ್ಲಿ ನಾಯಕರು ಬೆಳೆಯಬೇಕು ಎಂಬುದು ರಾಹುಲ್ ಗಾಂಧಿ ಅವರ ಚಿಂತನೆ. ವಿದ್ಯಾರ್ಥಿ ಚುನಾವಣೆ ನಿಷೇಧದ ನಂತರ, ನಾಯಕತ್ವ ಬೆಳೆಯುವುದಕ್ಕೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತಾಲೂಕು, ಜಿಲ್ಲಾ ಹಾಗೂ ರಾಜ್ಯಗಳ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಆಂದೋಲನ ಪ್ರಕ್ರಿಯೆ ಜಾರಿಗೆ ತಂದಿದ್ದಾರೆ. ಕರ್ನಾಟಕದಲ್ಲೂ ಅದು ನಡೆಯುತ್ತದೆ. ದಿಲ್ಲಿ ನಾಯಕರು ಹೇಗೆ ಮಾಡುತ್ತಾರೊ ಅದೇ ರೀತಿ ನಾವು ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ. ನಾನು ಯಾರ ಪರವಾಗಿಯೂ ನಿಲ್ಲುವುದಿಲ್ಲ. ನನಗೆ ಎಲ್ಲ ಯುವಕರೂ ಒಂದೇ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತು ಯಾರ ಮೇಲೂ ವಿಶೇಷ ಪ್ರೀತಿ ತೋರುವುದಿಲ್ಲ. ಯಾರನ್ನೂ ನಿರ್ಲಕ್ಷ್ಯ ಮಾಡುವುದಿಲ್ಲ. ಪ್ರತಿ ಯುವಕರೂ ಬಹಳ ಮುಖ್ಯ. ಸ್ಪರ್ಧೆ ಇದ್ದು, ಎಲ್ಲರೂ ಶಾಂತಿಯುತವಾಗಿ, ಗೊಂದಲ ಇಲ್ಲದೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಎಲ್ಲರ ಜತೆ ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.
ನಾನು ಒಬ್ಬರ ಬಳಿ ಲಂಚ ಪಡೆಯಲಿಲ್ಲ, ನನ್ನ ಮೇಲೆ ಎಷ್ಟು ಪ್ರಕರಣ ದಾಖಲಿಸಿದ್ದಾರೆ? ಮಾಧ್ಯಮದವರು ನನ್ನ ಮೇಲೆ ಏನೆಲ್ಲಾ ವರದಿ ಮಾಡಿದ್ದೀರಿ. ಬಿಜೆಪಿ ನಾಯಕರ ಮೇಲೆ ಯಾವ ಯಾವ ಆರೋಪ ಇದೆ. ಅವರ ಮೇಲೆ ಯಾವುದೇ ಈಡಿ ಪ್ರಕರಣ ದಾಖಲಾಗಿಲ್ಲ. ಈಗ ಬೇರೆಯವರ ಮೇಲೆ ಪ್ರಕರಣಗಳು ಇಲ್ಲವೇ? ಇಲ್ಲಿ ಆರೋಪಿಯಾಗಿದ್ದವರು ಅಲ್ಲಿಗೆ ಹೋದ ತಕ್ಷಣ ಗಂಗಾ ಜಲದಂತೆ ಪವಿತ್ರರಾದರಾ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನನ್ನ ಮೇಲೆ ಯಾವ ದಾಳಿ ಮಾಡಿದ್ದಾರೆ? ಎಂಥದ್ದೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಅವರು ನನ್ನನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅದಕ್ಕೆ ನಾನು ಯಾಕೆ ಬೇಸರ ಮಾಡಿಕೊಳ್ಳಬೇಕು? ನಾನು ಯಾವ ಪಕ್ಷದ ನಾಯಕರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಪಕ್ಷ ಬದಲಿಸುವುದು ಅವರವರ ಆಯ್ಕೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯವರೂ ಹೋಗಬಹುದು. ನಮ್ಮ ನಾಯಕತ್ವ, ಪಕ್ಷದ ಸಿದ್ಧಾಂತಗಳ ಬಗ್ಗೆ ಯಾರಿಗೆ ನಂಬಿಕೆ ಇದೆಯೊ ಅವರು ಬಂದು ಅರ್ಜಿ ಕೊಟ್ಟು ಕಾಂಗ್ರೆಸ್ ಸೇರಬಹುದು ಎಂದು ಶಿವಕುಮಾರ್ ಹೇಳಿದರು.
ನಾನು ಯಾರನ್ನೂ ಎ ಟೀಮ್, ಬಿ ಟೀಮ್ ಎಂದು ಕರೆಯುವುದಿಲ್ಲ. ಹಾಗೆಂದು ನಾನು ಯಾಕೆ ಕರೆಯಲಿ? ಸಮಯ ಬಂದಾಗ, ಮೈತ್ರಿ ಸನ್ನಿವೇಶ ಬಂದಾಗ ಅವರ ಬಳಿ ನೀವೇ ಈ ಪ್ರಶ್ನೆ ಕೇಳಿ ಎಂದ ಅವರು, ಸಿ.ಎಂ.ಇಬ್ರಾಹಿಮ್ ನಮ್ಮ ಪಕ್ಷದ ಹಿರಿಯ ನಾಯಕರು, ಅವರಿಗೆ ಕೆಲವು ಅಸಮಾಧಾನ ಇರಬಹುದು. ಅದನ್ನು ಪಕ್ಷ ಸರಿಪಡಿಸಲಿದೆ. ಯಾರು ಕೂಡ ಜೆಡಿಎಸ್ಗೆ ಹೋಗುವುದಿಲ್ಲ ಎಂದರು.







