ಮೈಸೂರು ಜಿಲ್ಲೆಯಲ್ಲಿ ಹಕ್ಕಿಜ್ವರ ಕಂಡುಬಂದಿಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ

ಮೈಸೂರು,ಜ.6: ಮೈಸೂರು ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ. ಹಕ್ಕಿಜ್ವರದ ಪತ್ತೆಗಾಗಿ ಜಿಲ್ಲಾಡಳಿತ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.
ಹಕ್ಕಿ ಜ್ವರ ಆತಂಕ ಕುರಿತು ಮಾತನಾಡಿದ ಅವರು, ಅಕ್ಕಪಕ್ಕದ ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಅಲ್ಲಿ ಕಲ್ಲಿಂಗ್ ಆಪರೇಷನ್ ಕೂಡ ನಡೆಯುತ್ತಿದೆ. ಕಳೆದ ವರ್ಷ ಮೈಸೂರಿನಲ್ಲಿ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕಲ್ಲಿಂಗ್ ಆಪರೇಷನ್ ನಡೆದಿತ್ತು. ಅದಕ್ಕಾಗಿ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದೇವೆ. ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿ ಪಕ್ಷಿ ಹಾಗೂ ಕೋಳಿ ಸಾಗಾಟ ನಿಷೇಧ ಮಾಡಲಾಗಿದೆ. ಆ ರಾಜ್ಯಗಳಿಂದ ಬರುವ ವಾಹನಗಳನ್ನ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ. ವಲಸೆ ಹಕ್ಕಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಎಲ್ಲೆಲ್ಲಿ ವಲಸೆ ಹಕ್ಕಿಗಳು ಬರುತ್ತವೆ ಅಲ್ಲೆಲ್ಲ ಹಿಕ್ಕೆಗಳ ಸಂಗ್ರಹ ಮಾಡಿ ಲ್ಯಾಬ್ ಗೆ ಕಳುಹಿಸಲಾಗಿದೆ. ಈವರೆಗೆ ಬಂದಿರುವ ಲ್ಯಾಬ್ ವರದಿಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಮೃಗಾಲಯಕ್ಕೆ ತಾತ್ಕಾಲಿಕ ಪ್ರವೇಶ ನಿರ್ಬಂಧ ಅಥವಾ ಪ್ರವೇಶ ನಿರ್ಬಂಧ ಅಥವಾ ಇತರೆ ನಿರ್ಧಾರಗಳ ಬಗ್ಗೆ ತೀರ್ಮಾನಿಸಿಲ್ಲ. ಹಕ್ಕಿಜ್ವರ ಪತ್ತೆಯಾದರೆ ಮುಂದಿನ ಹಂತದ ನಿರ್ಧಾರ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟಪಡಿಸಿದರು.
ರೂಪಾಂತರಿತ ಕೊರೋನ ದೃಢವಾಗಿಲ್ಲ
ಬ್ರಿಟನ್ ನಿಂದ ಬಂದವರಿಗೆ ರೂಪಾಂತರಿ ಕೊರೋನ ಧೃಢವಾಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟ ಪಡಿಸಿದರು.
ಇಂದು ಬೆಳಿಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿದೆ. ರೂಪಾಂತರ ಕೊರೋನ ಮೈಸೂರು ಜಿಲ್ಲೆಯಲ್ಲಿ ಯಾರಿಗೂ ಧೃಢವಾಗಿಲ್ಲ. 137 ಮಂದಿಯ ಕೊರೋನ ವರದಿಯಲ್ಲಿ 1 ಕೊರೋನ ಪಾಸಿಟಿವ್ ಆಗಿತ್ತು. ಅವರಿಗೂ ರೂಪಾಂತರ ಕೊರೋನ ಇಲ್ಲ ಅಂತ ವರದಿ ಬಂದಿದೆ. ಮೈಸೂರು ಜಿಲ್ಲೆಗೆ ಬ್ರಿಟನ್ ವೈರಸ್ ಭಯ ಇಲ್ಲ ಎಂದರು.
ಕೊರೋನ ಲಸಿಕೆ ಅಭಿಯಾನಕ್ಕೆ ಸಿದ್ಧತೆ ಆಗಿದೆ. ಪ್ರಾರಂಭಿಕ ಹಂತದಲ್ಲಿ ಮೈಸೂರಿನ 32 ಸಾವಿರ ಕೊರೋನ ವಾರಿಯರ್ ಗಳಿಗೆ ಲಸಿಕೆ ಹಾಕುತ್ತೇವೆ. ಕೋವಿಡ್ ಲಸಿಕೆ ಅಭಿಯಾನ ಸಂಬಂಧ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫಿರೆನ್ಸ್ ನಡೆಸಿದ್ದಾರೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾವ ಲಸಿಕೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ 162 ಪಾಯಿಂಟ್ ಮಾಡಿಕೊಂಡಿದ್ದೇವೆ. ಪ್ರತಿ ಕೇಂದ್ರದಲ್ಲಿ 5 ವ್ಯಾಕ್ಸಿನೇಟರ್, ಸ್ಟೋರೇಜ್, ಅಗತ್ಯ ಸೌಕರ್ಯ ಎಲ್ಲವನ್ನೂ ರೆಡಿ ಮಾಡಿಕೊಂಡಿದ್ದೇವೆ. ಕೊರೋನ ವಾರಿಯರ್ ಗಳಾಗಿ ಕೆಲಸ ಮಾಡಿದ 15 ಸಾವಿರ ಸರ್ಕಾರಿ ಹಾಗೂ 17 ಸಾವಿರ ಖಾಸಗಿ ಸಿಬ್ಬಂದಿ ಇದ್ದಾರೆ. ಮೊದಲ ಹಂತದಲ್ಲಿ ಇರುವರಿಗೆ ಮಾತ್ರ ವ್ಯಾಕ್ಸಿನೇಷನ್ ಮಾಡುತ್ತೇವೆ. 100ಕ್ಕಿಂತ ಹೆಚ್ಚು ಜನ ಇರುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ಲಸಿಕೆ ಸರಬರಾಜು ಮಾಡುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಸದ್ಯ ಲಸಿಕೆ ಹಾಕುವುದಿಲ್ಲ. ಪ್ರೊಟೊಕಾಲ್ ಪ್ರಕಾರ ಮೊದಲು ಪ್ರೆಂಟ್ ಲೈನ್ ವಾರಿಯರ್ಸ್ ಲಸಿಕೆ ಹಾಕಬೇಕು. ನಂತರ ವಯಸ್ಸಾದವರು. ಇನ್ನೂ ನಾವು ಸಾರ್ವಜನಿಕ ಮಟ್ಟಕ್ಕೆ ಬಂದಿಲ್ಲ. ರಿಜಿಸ್ಟ್ರೇಷನ್ ಬಗ್ಗೆನೂ ನಮಗೆ ಮಾಹಿತಿ ಬಂದಿಲ್ಲ ಎಂದರು.







