ಸುಶಾಂತ್ ಸಿಂಗ್ ಮುಖದಲ್ಲೇ ಅವರು ಮುಗ್ಧ ಮತ್ತು ಶಾಂತ ಸ್ವಭಾವದವರು ಎಂದು ತಿಳಿಯುತ್ತದೆ: ಬಾಂಬೆ ಹೈಕೋರ್ಟ್
ಮುಂಬೈ,ಜ,8: ದಿವಂಗತ ನಟ ಸುಶಾಂತ್ ಸಿಂಗ್ ರಾಜಪುತ್ ಅವರ ʼಎಂ.ಎಸ್ ಧೋನಿ : ದಿ ಅನ್ಟೋಲ್ಡ್ ಸ್ಟೋರಿʼ ಸಿನೆಮಾದಲ್ಲಿನ ಅಭಿನಯವನ್ನು ಗುರುವಾರ ಶ್ಲಾಘಿಸಿದ ಬಾಂಬೆ ಹೈಕೋರ್ಟ್, "ಅವರೊಬ್ಬ ಒಳ್ಳೆಯ ಮನುಷ್ಯ ಎಂಬುದು ಅವರ ಮುಖ ನೋಡಿದಾಗಲೇ ತಿಳಿಯಬಹುದಾಗಿದೆ" ಎಂದು ಹೇಳಿದೆ.
ತಮ್ಮ ಸಹೋದರನಿಗಾಗಿ ಮೆಡಿಕಲ್ ಪ್ರಿಸ್ಕ್ರಿಪ್ಶನ್ ಅನ್ನು ತಿರುಚಿದ ಆರೋಪ ಹೊರಿಸಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸುಶಾಂತ್ ಸೋದರಿಯರಾದ ಪ್ರಿಯಾಂಕ ಸಿಂಗ್ ಹಾಗೂ ಮೀತು ಸಿಂಗ್ ಅವರು ಸಲ್ಲಿಸಿದ ಅಪೀಲಿನ ಮೇಲಿನ ತೀರ್ಪು ಕಾಯ್ದಿರಿಸುವ ವೇಳೆ ಜಸ್ಟಿಸ್ ಎಸ್ ಎಸ್ ಶಿಂಧೆ ಹಾಗೂ ಜಸ್ಟಿಸ್ ಎಂ ಎಸ್ ಕಾರ್ಣಿಕ್ ಅವರ ಪೀಠ ಮೇಲಿನಂತೆ ಹೇಳಿದೆ.
"ಪ್ರಕರಣವೇನೇ ಇರಲಿ... ಸುಶಾಂತ್ ಸಿಂಗ್ ರಾಜಪುತ್ ಅವರ ಮುಖ ನೋಡಿದಾಗ ಅವರು ಮುಗ್ಧ ಮತ್ತು ಶಾಂತ ಸ್ವಭಾವದವರು ಹಾಗೂ ಉತ್ತಮ ಮನುಷ್ಯರು ಎಂದು ತಿಳಿಯುತ್ತದೆ," ಎಂದು ಜಸ್ಟಿಸ್ ಶಿಂಧೆ ಹೇಳಿದರು.
"ಮುಖ್ಯವಾಗಿ ಎಂ ಎಸ್ ಧೋನಿ ಚಿತ್ರದಲ್ಲಿ ಎಲ್ಲರೂ ಅವರನ್ನು ಇಷ್ಟ ಪಟ್ಟಿದ್ದಾರೆ, ಎಂದೂ ಅವರು ಹೇಳಿದರು.
ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ನೀಡಿದ ದೂರಿನ ಆಧಾರದಲ್ಲಿ ಪ್ರಿಸ್ಕ್ರಿಪ್ಶನ್ ಫೋರ್ಜರಿಗೊಳಿಸಿದ ಪ್ರಕರಣವನ್ನು ಸುಶಾಂತ್ನ ಇಬ್ಬರು ಸೋದರಿಯರು ಹಾಗೂ ದಿಲ್ಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯ ತರುಣ್ ಕುಮಾರ್ ವಿರುದ್ಧ ಬಾಂದ್ರಾ ಪೊಲೀಸರು ಸೆಪ್ಟೆಂಬರ್ 7ರಂದು ದಾಖಲಿಸಿದ್ದರು.