ಶಕ್ತಿ ಸಂಸ್ಥೆಯಿಂದ ಕೊರೋನ ಜಾಗೃತಿ ನಾಟಕ ಉದ್ಘಾಟನೆ

ಮಂಗಳೂರು, ಜ.9: ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತ ಪಪೂ ಕಾಲೇಗಳಿಂದ ದತ್ತನಗರದ ಕಸ್ಟಮ್ಸ್ ಕಾಲೋನಿಯಲ್ಲಿ ಕೊರೋನ ಜಾಗೃತಿಯ ಬೀದಿ ನಾಟಕದ ಉದ್ಘಾಟನಾ ಸಮಾರಂಭ ಶನಿವಾರ ಉದ್ಘಾಟನೆಗೊಂಡಿತು.
ಕೋವಿಡ್-19ರ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಅಶೋಕ ಎಚ್. ದೀಪ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬೀದಿ ನಾಟಕದ ಮೂಲಕ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ತೆಗೆದುಕೊಂಡ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೋವಿಡ್-19 ಪ್ರಕರಣಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸುವಾಗ ಅಕ್ಷರಾಭ್ಯಾಸ ಇಲ್ಲದಿರುವವರಿಗಿಂತ ಅಕ್ಷರಾಭ್ಯಾಸವನ್ನು ಪಡೆದಿರುವವರು ಹೆಚ್ಚು ಅಜ್ಞಾನ ಹಾಗೂ ನಿರ್ಲಕ್ಷ್ಯ ಹೊಂದಿದ್ದಾರೆ. ಕೋವಿಡ್ನ ನಿಯಮಾವಳಿಯನ್ನು ಹೆಚ್ಚು ಪಾಲನೆ ಮಾಡುತ್ತಿದ್ದರೆ ಸಾವು ನೋವಿನ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಕಸ್ಟಮ್ಸ್ನ ಜಂಟಿ ಆಯುಕ್ತ ಜೋವಾನ್ನೆಸ್ ಜಾರ್ಜ್ ಸಿ. ಮಾತನಾಡಿ, ಕೊರೋನ ವೈರಸ್ ನಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರದಂತೆ ಮಾಡಲು ಹೆಚ್ಚಿನ ಜಾಗೃತಿ ಹೊಂದುವ ಅವಶ್ಯಕತೆಯಿದೆ. ಎಲ್ಲ ನಿಯಮವಳಿ ಅನುಸರಿಸಿ ಬೀದಿನಾಟಕವನ್ನು ಆಯೋಜಿಸಿರುವ ಅಧ್ಯಾಪಕರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್ ಮಾತನಾಡಿದರು. ಶಕ್ತಿ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸಿ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಕೋವಿಡ್ ಜಾಗೃತ ದಳದ ಅಧಿಕಾರಿ ಡಾ.ಜಗದೀಶ ಕೆ., ಕಸ್ಟಮ್ಸ್ನ ಉಪ ಆಯುಕ್ತ ಪ್ರವೀಣ್ ಕಂಡಿ, ಕಸ್ಟಮ್ಸ್ ಸಹಾಯಕ ಆಯುಕ್ತ ರಮೇಶ್ಚಂದ್ರ, ಕಸ್ಟಮ್ಸ್ ಪ್ರಧಾನ ಲೆಕ್ಕಾಧಿಕಾರಿ ಹೀರೆಸ್ವಾಮಿ, ದತ್ತನಗರ ನಾಗರಿಕ ಸಮಿತಿ ಅಧ್ಯಕ್ಷ ವಿನಯಕುಮಾರ್ ಮತ್ತು ಕಾರ್ಯದರ್ಶಿ ಹರೀಶ ಗೌಡ, ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಕೊರೋನ ಜಾಗೃತಿ ಬೀದಿ ನಾಟಕವನ್ನು ಶಾಲೆಯ ಕನ್ನಡ ಅಧ್ಯಾಪಕ ಶರಣಪ್ಪ ರಚಿಸಿದ್ದಾರೆ. ನಾಟಕಕ್ಕೆ ಮುರಲೀಧರ್ ಕಾಮತ್ ಅವರ ಸಂಗೀತ ಹಾಗೂ ನಿರ್ದೇಶನವಿದೆ. ಹಿಂದಿ ಅಧ್ಯಾಪಕಿ ಪ್ರೇಮಲತಾ ಸ್ವಾಗತಿಸಿದರು. ಭವ್ಯಶ್ರೀ ವಂದಿಸಿದರು. ರೇಖಾ ಡಿಕೋಸ್ಟ ಕಾರ್ಯಕ್ರಮ ನಿರೂಪಿಸಿದರು.











