ಗೋಹತ್ಯೆ ನಿಷೇಧ, ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ಖಂಡಿಸಿ ಬೀದಿಗಿಳಿದು ಹೋರಾಟ: ಸಿದ್ದರಾಮಯ್ಯ
‘ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು' ಕಿರು ಹೊತ್ತಿಗೆ ಬಿಡುಗಡೆ

ಬೆಂಗಳೂರು, ಜ. 10: ‘ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಅಸ್ತ್ರವಾಗಿಟ್ಡುಕೊಂಡು ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ' ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ರವಿವಾರ ತನ್ನ ನಿವಾಸದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಹೊರತಂದಿರುವ ‘ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು' ಕಿರು ಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಶೀಘ್ರದಲ್ಲೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಜೈಲ್ ಭರೋ ಚಳವಳಿಯನ್ನೂ ಹಮ್ಮಿಕೊಳ್ಳಲಾಗುವುದು ಎಂದ ಅವರು, ಸರಕಾರ ಜಾರಿಗೆ ತಂದಿರುವಂತಹ 5 ಕಾಯ್ದೆಗಳ ಸತ್ಯಾಸತ್ಯತೆಯನ್ನು ತಿಳಿಸುವ ವಿಚಾರಗಳನ್ನು ಒಳಗೊಂಡ ಸಣ್ಣ ಪುಸ್ತಕ ಬಿಡುಗಡೆ ಮಾಡಿದ್ದೇವೆ. ಇದು ಜನರಿಗೆ ಸತ್ಯವನ್ನು ತಿಳಿಸುವ ನಮ್ಮ ಪ್ರಯತ್ನವಾಗಿದೆ ಎಂದು ಹೇಳಿದರು.
ಎಪಿಎಂಸಿ ತಿದ್ದುಪಡಿ, ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಜಾನುವಾರ ಹತ್ಯೆ ನಿಷೇಧ, ಕೃಷಿ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಸೇರಿದಂತೆ ಐದು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ ಎಂದ ಅವರು, ಎಪಿಎಂಸಿ ಕಾಯ್ದೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದರು.
ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಮಾರುಕಟ್ಟೆಗೆ ಬಂದು ಮಾರಾಟ ಮಾಡುವ ಅಗತ್ಯವಿಲ್ಲ. ಅದನ್ನು ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿಯವರ ವಾದ. ವಾಸ್ತವದಲ್ಲಿ ಆರಂಭದ ದಿನಗಳಲ್ಲಿ ಇದು ಲಾಭದಾಯಕವಾದರೂ ನಂತರದ ದಿನಗಳಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಎಪಿಎಂಸಿಗಳಲ್ಲಿ ಲೈಸನ್ಸ್ ಹೊಂದಿರುವವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ನಿಯಮವಿದೆ. ಜೊತೆಗೆ ಹರಾಜು ಪ್ರಕ್ರಿಯೆಯಲ್ಲಿ ರೈತನಿಗೆ ತನ್ನ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ ಎಂದು ಅನಿಸಿದರೆ ಎಪಿಎಂಸಿಗಳಲ್ಲಿರುವ ಗೋದಾಮುಗಳಲ್ಲಿ ಸಂಗ್ರಹಿಸಿಡಲು ಅವಕಾಶವಿದೆ.
ರಾಜ್ಯ ಸರಕಾರದ ಹೊಸ ತಿದ್ದುಪಡಿ ತಂದಿರುವುದರಿಂದ ಖರೀದಿದಾರರು ಲೈಸನ್ಸ್ ಪಡೆಯುವ ಅಗತ್ಯವಿರುವುದಿಲ್ಲ. ಖಾಸಗಿ ವ್ಯಕ್ತಿಗಳು ತಮ್ಮದೆ ಆದ ಮಾರುಕಟ್ಟೆಗಳನ್ನು ಸ್ಥಾಪನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಕಾಲಕ್ರಮೇಣ ಎಪಿಎಂಸಿಗಳು ಮುಚ್ಚಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಸರಕಾರದ ಉದ್ದೇಶ ಎಪಿಎಂಸಿಗಳನ್ನು ನಾಶ ಮಾಡುವುದು ಹಾಗೂ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವುದಾಗಿದೆ. ಇದಕ್ಕೆ ಪೂರಕವಾಗಿ ನಿರ್ಮಲಾ ಸೀತಾರಾಮನ್ ಅವರು ‘ಇದು ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮುಚ್ಚಲು ಸಕಾಲ' ಎಂದಿದ್ದಾರೆ. ಎಪಿಎಂಸಿಗಳು ಬಂದ್ ಆದ ನಂತರ ರೈತರು ಖಾಸಗಿ ವ್ಯಕ್ತಿಗಳ ಮುಲಾಜಿಗೆ ಬೀಳುತ್ತಾರೆ. ಈಗ ಸರಕಾರ ನೀಡುತ್ತಿರುವ ಬೆಂಬಲ ಬೆಲೆಯನ್ನು ನಿಲ್ಲಿಸಲ್ಲ ಎಂದು ಹೇಳಿದೆ, ಹಾಗಾದರೆ ಇದನ್ನು ಕಾನೂನು ಮೂಲಕ ದೃಢಪಡಿಸಿ ಎಂದು ರೈತರು ಸರಕಾರವನ್ನು ಒತ್ತಾಯಿಸಿದರೆ ಅದನ್ನು ಒಪ್ಪಲು ಸರಕಾರ ಸಿದ್ಧವಿಲ್ಲ. ಇದು ಹೊಸದಿಲ್ಲಿ ಪ್ರತಿಭಟನೆಯಲ್ಲಿ ನಿರತವಾಗಿರುವ ಭಾರತೀಯ ರೈತ ಸಂಘದ ಬೇಡಿಕೆಯೂ ಆಗಿದೆ ಎಂದು ಅವರು ಹೇಳಿದರು.
ಇನ್ನು ಸರಕಾರ ತಿದ್ದುಪಡಿ ತಂದಿರುವಂತಹ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ-ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂದು ಸರಕಾರ ಹೇಳುತ್ತಿದೆ. 1973ರಲ್ಲಿ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ‘ಉಳುವವನೇ ಭೂಮಿಯ ಒಡೆಯ' ಎಂದು ಘೋಷಿಸಿದರು. ಆ ಮೂಲಕ ಸಾವಿರಾರು ಕುಟುಂಬಗಳು ಭೂಮಿಯ ಒಡೆತನ ಪಡೆಯಿತು. ಈಗ ಸರಕಾರ 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಭೂಮಿ ಖರೀದಿಸುವ ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ. ಸರಕಾರ ತಿದ್ದುಪಡಿ ಮೂಲಕ ‘ಉಳ್ಳವನನ್ನು ಭೂಮಿಯ ಒಡೆಯ' ಮಾಡಲು ಹೊರಟಿದೆ. ಮತ್ತೊಂದು ಮುಖ್ಯ ವಿಚಾರ ಹಿಂದಿನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಭೂಮಿ ಖರೀದಿಸಿದ್ದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿರುವ 13,814 ಮೊಕದ್ದಮೆಗಳನ್ನು ವಜಾಗೊಳಿಸಲು ಅವಕಾಶ ನೀಡುತ್ತದೆ. ಈ ತಿದ್ದುಪಡಿ ಹಿಂದೆ ಹಣದ ಅವ್ಯವಹಾರ ನಡೆದಿದೆ, ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಸಿದ್ದರಾಮಯ್ಯ ದೂರಿದರು.
ಈ ವಿಚಾರವನ್ನು ಪ್ರಸ್ತಾಪಿಸಿದರೆ ಸಿದ್ದರಾಮಯ್ಯ, ಭೂಮಿ ಖರೀದಿಗೆ ಇದ್ದ ಕೃಷಿಯೇತರ ಆದಾಯದ ಮಿತಿಯನ್ನು 25 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ ಅಂತಾರೆ. ಸತ್ಯ ವಿಚಾರ ಏನೆಂದರೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರ ಆದಾಯ ಮಿತಿಯನ್ನು ಮಾತ್ರ ಏರಿಕೆ ಮಾಡಿದ್ದೆವು. ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಬಗ್ಗೆ ಸರಕಾರ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಹೀಗಾಗಿ ಇಂದು ಬಿಡುಗಡೆಗೊಂಡಿರುವ ಪುಸ್ತಕದಲ್ಲಿ ಇಂತಹ ಹಲವು ವಿಚಾರಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
1964ರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಲ್ಲಿ ಜಾನುವಾರುಗಳ ರಕ್ಷಣೆಗಾಗಿ ಹಾಲು ನೀಡುವಂತಹ ಪ್ರಾಣಿಗಳ ವಧೆ ಮಾಡಬಾರದು ಮತ್ತು ಪ್ರಾಯದ ಜಾನುವಾರುಗಳನ್ನು ಹತ್ಯೆ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಒಂದು ಜೊತೆ ಎತ್ತಿಗೆ ಕನಿಷ್ಠ 2 ಲಕ್ಷ ರೂ. ಇದೆ. ಅವುಗಳಿಗೆ ವಯಸ್ಸಾದ ಮೇಲೆ ಅವನ್ನು ಸಾಕಲು 7 ಕೆ.ಜಿ ಮೇವು ಬೇಕು ಮತ್ತು 100 ರೂ.ಖರ್ಚಾಗುತ್ತದೆ. ಇದರ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಿಲ್ಲ. ಬಿಜೆಪಿಯವರು ಯಾರೂ ಸಗಣಿ ಎತ್ತಿಲ್ಲ, ಗಂಜಲ ತೆಗೆದಿಲ್ಲ, ಬೆರಣಿ ತಟ್ಟಿಲ್ಲ, ಹಸುಗಳನ್ನು ಸಾಕಿದ ಅಭ್ಯಾಸವಿಲ್ಲ ಅದಕ್ಕಾಗಿಯೇ ಈ ರೀತಿ ಮಾತನಾಡುತ್ತಾರೆ. ಈಗ ಗೋಹತ್ಯೆ ಬಗ್ಗೆ ಮಾತನಾಡುವವರಾರು ಜಾನುವಾರುಗಳನ್ನು ನಮ್ಮಂತೆ ಪೂಜೆ ಮಾಡಿದವರಲ್ಲ, ಇಂಥವರು ನಮಗೆ ಗೋಮಾತೆ ಬಗ್ಗೆ ಪಾಠ ಮಾಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಿಶ್ರತಳಿ ಹಸುಗಳು ಗಂಡು ಅಥವಾ ಹೆಣ್ಣು ಕರುಗಳನ್ನು ಹಾಕುತ್ತವೆ. ಹೆಣ್ಣು ಕರುವಾದರೆ ಅದನ್ನು ಹೈನುಗಾರಿಕೆ ಉದ್ದೇಶಕ್ಕಾಗಿ ಸಾಕುತ್ತಾರೆ, ಅದೇ ಗಂಡು ಕರು ಹಾಕಿದರೆ ಅದನ್ನು ಏನು ಮಾಡಬೇಕು? ಸರಕಾರ ಗೋಶಾಲೆಗಳನ್ನು ತೆರೆಯುತ್ತೇವೆ, ಸಾಕಲು ಆಗದವರು ಗೋಶಾಲೆಗೆ ಜಾನುವಾರುಗಳನ್ನು ತಂದು ಬಿಡಿ, ಅವುಗಳನ್ನು ಸಾಕಲು ನೀವೆ ಹಣವನ್ನು ಕೊಡಬೇಕು ಎಂದು ಹೇಳಿದೆ ಎಂದು ಸಿದ್ದರಾಮಯ್ಯ ದೂರಿದರು.
ಈ ಕಾಯ್ದೆಯಲ್ಲಿ ಎಮ್ಮೆ ಮತ್ತು ಕೋಣಗಳನ್ನು ಕೊಂದು ತಿನ್ನಲು ಅವಕಾಶ ನೀಡಲಾಗಿದೆ. ಈ ಕಾರಣಕ್ಕಾಗಿ ಇಡೀ ದೇಶದಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಬೇಕು ಮತ್ತು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಷೇಧ ಮಾಡಿ ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್ನಿಂದ ಬರುವ ಹಸುವಿನ ಮಾಂಸ ಗೋಮಾತೆಯಾಗುವುದಿಲ್ಲವೇ?, ಮುದಿ ಎತ್ತು, ಹಸು, ಎಮ್ಮೆ ಕೋಣಗಳನ್ನು ಸಾಕವುದರಿಂದ ರೈತರ ಮೇಲಾಗುವ ಆರ್ಥಿಕ ಹೊರೆಯನ್ನು ಸರಕಾರ ಪರಿಗಣಿಸಬೇಕು, ಗೋಹತ್ಯೆ ನಿಷೇಧ ಕಾಯ್ದೆಯಿಂದ ಚರ್ಮೋದ್ಯಮದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ದೇಶದಿಂದ ರಫ್ತಾಗುತ್ತಿರುವ ಗೋಮಾಂಸವನ್ನು ಮೊದಲು ನಿಷೇಧಿಸಬೇಕು. ಈ ಉದ್ದೇಶಕ್ಕಾಗಿ ಒಂದು ರಾಷ್ಟ್ರಕ್ಕೆ ಅನುಗುಣವಾಗುವಂತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿಯವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯ ಬಗ್ಗೆ ಮಾತನಾಡುವುದಿಲ್ಲ. ಗ್ಯಾಸ್ ಬೆಲೆ 750 ರೂ.ಗಳಿಗೆ ಏರಿಕೆಯಾಗಿದೆ, ಮೋದಿಯವರು ಅಧಿಕಾರಕ್ಕೆ ಬಂದಾಗ ಗ್ಯಾಸ್ ಬೆಲೆ 300 ರೂ.ನಿಂದ 350 ರೂ.ಇತ್ತು. 2012-13ರ ಸಂದರ್ಭದಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದಕ್ಕೆ 110 ಡಾಲರ್ ಇತ್ತು. ಆಗ ಯುಪಿಎ ಸರಕಾರ ಪೆಟ್ರೋಲ್ ಅನ್ನು 60-65 ರೂ.ಗೆ ಮಾರಾಟ ಮಾಡುತ್ತಿತ್ತು. ಈಗ ಕಚ್ಚಾತೈಲ ಬೆಲೆ ಬ್ಯಾರಲ್ಗೆ 42 ಡಾಲರ್ ಇದೆ, ಅಂದರೆ ಈಗಿನ ತೈಲ ಬೆಲೆಯ ಅರ್ಧಕ್ಕೆ ಅಂದರೆ ಪೆಟ್ರೋಲ್ 40 ರೂ.ಗೆ, ಡೀಸೆಲ್ ಅನ್ನು 30 ರೂ.ಗೆ ಮಾರಾಟ ಮಾಡಬೇಕು. ಮೋದಿಯವರು ಮಾತೆತ್ತಿದರೆ ‘ಸಬ್ ಕ ಸಾಥ್ ಸಬ್ ಕ ವಿಕಾಸ್' ಅನ್ನುತ್ತಾರೆ, ಇವರ ಆಡಳಿತದಿಂದ ಸಾಮಾನ್ಯ ಜನರ ವಿಕಾಸವಂತೂ ಆಗಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
‘ಗೋಮಾಂಸವನ್ನು ಆಮದು ಮಾಡುವವರು ಬಿಜೆಪಿಯವರೇ. ವಿಧೇಶಗಳಿಗೆ ರಫ್ತು ಮಾಡುತ್ತಿರುವವರು ಬಿಜೆಪಿಯವರೇ. ಆದರೆ ಒಂದು ಸಮುದಾಯವನ್ನು ಮಾತ್ರ ಗೋಹತ್ಯೆ ಮಾಡುವವರು ಎಂಬುದಾಗಿ ಬಿಂಬಿಸಲಾಗುತ್ತಿದೆ'
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ







