ಉಡುಪಿ: ಪೊಲೀಸರ ಸೋಗಿನಲ್ಲಿ ಮಹಿಳೆಯ ಚಿನ್ನಾಭರಣ ಸುಲಿಗೆ
![ಉಡುಪಿ: ಪೊಲೀಸರ ಸೋಗಿನಲ್ಲಿ ಮಹಿಳೆಯ ಚಿನ್ನಾಭರಣ ಸುಲಿಗೆ ಉಡುಪಿ: ಪೊಲೀಸರ ಸೋಗಿನಲ್ಲಿ ಮಹಿಳೆಯ ಚಿನ್ನಾಭರಣ ಸುಲಿಗೆ](https://www.varthabharati.in/sites/default/files/images/articles/2021/01/10/274558-1610295990.jpg)
ಉಡುಪಿ, ಜ.10: ಪೊಲೀಸರ ಹೆಸರಿನಲ್ಲಿ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಚಿನ್ನಾಭರಣ ದೋಚಿರುವ ಘಟನೆ ರವಿವಾರ ಮಧ್ಯಾಹ್ನ ಅಂಬಲಪಾಡಿ ಶ್ಯಾಮಿಲಿ ಹಾಲ್ ಸಮೀಪ ನಡೆದಿದೆ.
ಅಂಬಲಪಾಡಿ ನಿವಾಸಿ ವಸಂತಿ(47) ಎಂಬವರು ಮನೆ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನೊಂದಿಗೆ ನಿಂತುಕೊಂಡಿದ್ದರು. ಮಹಿಳೆಯನ್ನು ತಡೆದ ಅವರು, ನಾವು ಪೊಲೀಸರು, ಮುಂದೆ ಕಳ್ಳರು ಮಹಿಳೆಗೆ ಚೂರಿ ತೋರಿಸಿ ಚಿನ್ನದ ಸರ ತೆಗೆದು ಕೊಂಡು ಹೋಗಿದ್ದಾರೆ. ನಿಮ್ಮ ಚಿನ್ನಾಭರಣಗಳನ್ನು ತೆಗೆದು ಕೊಡಿ, ಪೇಪರ್ನಲ್ಲಿ ಕಟ್ಟಿಕೊಡುತ್ತೇನೆ ಎಂದು ನಂಬಿಸಿದರು.
ಅದರಂತೆ ವಸಂತಿ ತನ್ನಲ್ಲಿದ್ದ 40,000 ರೂ. ಮೌಲ್ಯದ ಮುಕ್ಕಾಲು ಪವನ್ ಚಿನ್ನದ ಸರ ಹಾಗೂ ಅರ್ಧ ಪವನ್ನ 2 ಚಿನ್ನದ ಬಳೆಗಳನ್ನು ಅವರಿಗೆ ನೀಡಿದರು. ಅವರು ಅದನ್ನು ಪೇಪರ್ ನಲ್ಲಿ ಸುತ್ತಿ ವಾಪಾಸು ಕೊಟ್ಟು ಬೈಕಿನಲ್ಲಿ ಹೋದರೆನ್ನಲಾಗಿದೆ. ಬಳಿಕ ಅನುಮಾನ ಗೊಂಡ ವಸಂತಿ ಪೇಪರ್ ಬಿಡಿಸಿ ನೋಡಿದಾಗ ಅದರಲ್ಲಿ ಐದು ನಕಲಿ ಬಳೆಗಳಿದ್ದವು ಎಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.