ಅಂಗಾರರಿಗೆ ಸಚಿವ ಸ್ಥಾನ ಖಚಿತ ?
![ಅಂಗಾರರಿಗೆ ಸಚಿವ ಸ್ಥಾನ ಖಚಿತ ? ಅಂಗಾರರಿಗೆ ಸಚಿವ ಸ್ಥಾನ ಖಚಿತ ?](https://www.varthabharati.in/sites/default/files/images/articles/2021/01/12/274836-1610471535.jpg)
ಸುಳ್ಯ, ಜ.12: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ದ.ಕ. ಜಿಲ್ಲೆಗೆ ಮಂತ್ರಿಗಿರಿ ಖಚಿತ ಎಂದು ಹೇಳಲಾಗುತ್ತಿದೆ. ಆರು ಬಾರಿಯ ಶಾಸಕ ಎಸ್.ಅಂಗಾರ ಮೊದಲ ಬಾರಿ ಸಚಿವರಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬುಧವಾರ ನಡೆಯುವ ಸಚಿವ ಸಂಪುಟದಲ್ಲಿ ಅಂಗಾರರಿಗೆ ಸಚಿವ ಸ್ಥಾನ ಖಚಿತವಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುವ ಹಿನ್ನೆಲೆಯಲ್ಲಿ ಸಚಿವರ ಸಂಭಾವ್ಯ ಪಟ್ಟಿಯಲ್ಲಿ ಹೆಸರಿದ್ದ ಶಾಸಕ ಎಸ್.ಅಂಗಾರ ಮಂಗಳವಾರ ಮಧ್ಯಾಹ್ನವೇ ಬೆಂಗಳೂರಿಗೆ ತೆರಳಿದ್ದಾರೆ.
ಸಚಿವ ಸಂಪುಟ ಸೇರಲಿರುವ ಎಂಟು ಶಾಸಕರ ಹೆಸರು ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಸಂಪುಟ ವಿಸ್ತರಣೆ ಸುದ್ದಿ ಹೊರ ಬೀಳುತ್ತಿದ್ದಂತೆ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ನಿರಂತರ ಆರು ಬಾರಿ ಆಯ್ಕೆಯಾಗಿರುವ ಸರಳ ಸಜ್ಜನಿಕೆಯ ಶಾಸಕ ಎಂದೇ ಜನಜನಿತರಾದ ಎಸ್.ಅಂಗಾರ ಸಚಿವರಾಗಬಹುದು ಎಂಬ ನಿರೀಕ್ಷೆ ಗರಿಗೆದರಿತ್ತು. ಈ ಕುರಿತು ಎಲ್ಲೆಡೆ ಚರ್ಚೆಗಳು ನಡೆಯುತ್ತಿತ್ತು. ಅಂಗಾರ ಸಚಿವರಾದಲ್ಲಿ ಈ ಬಾರಿಯ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಮೊದಲ ಸಲ ದ.ಕ. ಜಿಲ್ಲೆಗೆ ಪ್ರಾಶಸ್ತ್ಯ ದೊರೆತಂತಾಗುತ್ತದೆ.