ಅಷ್ಟಮಠಾಧೀಶರಿಂದ ರಾಮಮಂದಿರಕ್ಕೆ ನಿಧಿ ಅರ್ಪಣೆ
![ಅಷ್ಟಮಠಾಧೀಶರಿಂದ ರಾಮಮಂದಿರಕ್ಕೆ ನಿಧಿ ಅರ್ಪಣೆ ಅಷ್ಟಮಠಾಧೀಶರಿಂದ ರಾಮಮಂದಿರಕ್ಕೆ ನಿಧಿ ಅರ್ಪಣೆ](/images/placeholder.jpg)
ಉಡುಪಿ, ಜ.15: ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ದೇಶಾದ್ಯಾಂತ ಹಮ್ಮಿಕೊಂಡಿರುವ ನಿಧಿ ಸಮರ್ಪಣಾ ಅಭಿಯಾನದಂಗವಾಗಿ ಇಂದು ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಚೂರ್ಣೋತ್ಸವದ ಬಳಿಕ ಉಡುಪಿಯ ಅಷ್ಟಮಠಗಳ ಯತಿಗಳಿಂದ ನಿಧಿಯನ್ನು ಸಂಗ್ರಹಿಸಲಾಯಿತು.
ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರ ನೇತೃತ್ವದಲ್ಲಿ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಿಧಿ ಸಮರ್ಪಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ವಿಹಿಂಪನ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಂಘ ಪರಿವಾರದ ರಾಮಚಂದ್ರ, ಸನಿಲ್, ಸುರೇಶ ಹೆಜಮಾಡಿ, ಗಣಪತಿ ನಾಯಕ್, ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.