ಬೈಕ್ ನಲ್ಲೇ ಹಲವು ರಾಷ್ಟ್ರ ಪರ್ಯಟನೆ ಮಾಡಿದ್ದ ಬೆಂಗಳೂರಿನ ಖ್ಯಾತ ಬೈಕರ್ ಅಪಘಾತದಲ್ಲಿ ಮೃತ್ಯು
ಜೈಪುರ, ಜ.15: ರಾಜಸ್ತಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರಿನ ಖ್ಯಾತ ಬೈಕರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ಮೃತಪಟ್ಟಿರುವುದಾಗಿ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಬುಧವಾರ ರಾತ್ರಿ ತನ್ನ ಮೂವರು ಮಿತ್ರರೊಂದಿಗೆ ಜೈಸಲ್ಮೇರ್ನತ್ತ ತೆರಳುತ್ತಿದ್ದಾಗ ಫತೇಗಢ ಉಪವಿಭಾಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಿಚರ್ಡ್ ಚಲಾಯಿಸುತ್ತಿದ್ದ ಬೈಕ್ನ ಎದುರು ಹಠಾತ್ತಾಗಿ ಒಂಟೆಯೊಂದು ಬಂದದ್ದರಿಂದ ನಿಯಂತ್ರಣ ತಪ್ಪಿದ ಬೈಕ್ ಒಂಟೆಗೆ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ರಿಚರ್ಡ್ ತಲೆಗೆ ತೀವ್ರ ಏಟುಬಿದ್ದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತರಾಗಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ರಿಚರ್ಡ್ ಅವರೊಂದಿಗೆ ಬೆಂಗಳೂರಿನ ನಾರಾಯಣ, ಚೆನ್ನೈಯ ಡಾ ವಿಜಯ್ ಮತ್ತು ವೇಣುಗೋಪಾಲ್ ತಮ್ಮ ಬೈಕ್ಗಳಲ್ಲಿ ಪ್ರವಾಸ ಹೊರಟಿದ್ದರು.
ತನ್ನ ಟೈಗರ್ 800 ಬೈಕ್ನಲ್ಲಿ ಏಶ್ಯ, ಯುರೋಪ್, ಅಮೆರಿಕ ಮತ್ತು ಆಸ್ಟ್ರೇಲಿಯಾ ದೇಶ ಸುತ್ತಿದ್ದ ರಿಚರ್ಡ್, ಆಫ್ರಿಕಾ ಖಂಡಕ್ಕೆ ಪ್ರಯಾಣ ಮಾಡುವ ಯೋಜನೆ ಹಾಕಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.