ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಟೀಕೆಗೆ ಗುರಿಯಾದ ವಿಜಯ್ ಸೇತುಪತಿ ,ಕ್ಷಮೆಯಾಚನೆ
ಚೆನ್ನೈ: ತಮಿಳು ನಟ ವಿಜಯ ಸೇತುಪತಿ ಶನಿವಾರ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು,ಸಾಮಾಜಿಕ ಮಾಧ್ಯಮದಲ್ಲಿ ನಟನಿಗೆ ಶುಭಾಶಯಗಳು ಹರಿದುಬಂದಿದ್ದವು. ಖಡ್ಗದಿಂದ ಹುಟ್ಟುಹಬ್ಬದ ಕೇಕ್ನ್ನು ಕತ್ತ್ತರಿಸುತ್ತಿರುವ ವಿಜಯ್ ಅವರ ವೈರಲ್ ಆಗಿರುವ ಫೋಟೊವನ್ನು ಬೆಟ್ಟು ಮಾಡಿ ಕೆಲವರು ಟೀಕಿಸಿದ್ದಾರೆ.
ವಿಜಯ್ ತನ್ನಮುಂದಿನ ಸಿನೆಮಾ ತಂಡದೊಂದಿಗೆ ಹುಟ್ಟುಹಬ್ವವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಖಡ್ಗದಿಂದ ಕೇಕನ್ನು ಕತ್ತರಿಸಿದ್ದರು.
ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ 'ಮಾಸ್ಟರ್' ಚಿತ್ರದ ನಟ ವಿಜಯ್, ಖಡ್ಗದಿಂದ ಹುಟ್ಟುಹಬ್ಬದ ಕೇಕನ್ನು ಕತ್ತರಿಸಿ ತಪ್ಪುಸಂದೇಶ ರವಾನಿಸಿದ್ದಕ್ಕೆ ಕ್ಷಮೆಯಾಚಿಸಿದರು.
"ನನ್ನ ಜನ್ಮದಿನಕ್ಕೆ ಶುಭ ಹಾರೈಸಿದ ಎಲ್ಲ ಪ್ರಸಿದ್ಧ ವ್ಯಕ್ತಿಗಳು ಹಾಗೂ ಅಭಿಮಾನಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಮೂರು ದಿನಗಳ ಹಿಂದೆ ನನ್ನ ಕಚೇರಿಯಲ್ಲಿ ತೆಗೆದ ಫೋಟೊ ಚರ್ಚೆಗೆ ಕಾರಣವಾಗಿದೆ. ನಾನು ಇದೀಗ ಪೊನ್ ರಾಮ್ ಸರ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವೆ. ಈ ಸಿನೆಮಾದಲ್ಲಿ ಖಡ್ಗ ಅತ್ಯಂತ ಮುಖ್ಯ ಪಾತ್ರವಾಗಿ ಕಂಡುಬರುತ್ತದೆ. ಹೀಗಾಗಿ ನಾನು ಸಿಬ್ಬಂದಿಯೊಂದಿಗೆ ಕೇಕ್ ಕತ್ತರಿಸಿದ್ದೇನೆ. ಇದು ತಪ್ಪು ಪೂರ್ವ ನಿದರ್ಶನವನ್ನು ನೀಡುತ್ತದೆ ಎಂದು ಹಲವರು ಹೇಳಿದ್ದಾರೆ. ಇನ್ನು ನಾನು ಈ ವಿಷಯಗಳ ಬಗ್ಗೆ ಜಾಗರೂಕತನಾಗಿರುತ್ತೇನೆ. ಈ ರೀತಿ ಮಾಡಿದ್ದು ಯಾರಿಗಾದರೂ ನೋವುಂಟು ಮಾಡಿದ್ದರೆ, ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಹೇಳಿದ್ದಾರೆ.