ಲಂಚ ಸ್ವೀಕಾರ ಆರೋಪಿಯ ಜಾಮೀನು ಅರ್ಜಿ ವಜಾ
ಮಂಗಳೂರು, ಜ.20: ಲಂಚ ಸ್ವೀಕಾರ ಆರೋಪದಲ್ಲಿ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷನ್ಸ್ ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರಫೀಕ್ ಎಂಬಾತನ ಜಾಮೀನು ವಜಾಗೊಂಡಿದೆ.
ಆರೋಪಿಯು ಕೆಐಎಡಿಬಿಯ ಭೂಸ್ವಾದೀನ ಪರಿಹಾರದ ಬಗ್ಗೆ ಅರ್ಜಿ ವಿಲೇವಾರಿ ಮಾಡಲು ತೋಕೂರು ಗ್ರಾಮದ ಓಸ್ವಲ್ಡ್ ವೇಗಸ್ ಎಂಬವ ರಿಂದ 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಓಸ್ವಾಲ್ಡ್ ವೇಗಸ್ ನೀಡಿದ್ದ ದೂರಿನ ಆದಾರದಲ್ಲಿ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಕೆ.ಸಿ. ಪ್ರಕಾಶ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಗುರುರಾಜ್ ತಂಡ ದಾಳಿ ನಡೆಸಿ ಆರೋಪಿಯನ್ನು ಜ.5ರಂದು ಬಂಧಿಸಿತ್ತು.
ಆರೋಪಿ ಸದ್ಯ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ, ಅಪರಾಧದ ಗಂಭೀರತೆ ಪರಿಗಣಿಸಿ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.
ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪರ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.